ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡ ಬಸವನಗೌಡ ತುರ್ವಿಹಾಳ ಅವರು ಕೊನೆಗೂ ವರಿಷ್ಠರ ಮನವೊಲಿಕೆಗೆ ಮಣಿದಿದ್ದು, ತುಂಗಾಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಕಾಡಾ) ಅಧ್ಯಕ್ಷರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರು ಬಿಜೆಪಿಯಿಂದ ಉಪಚುನಾವಣೆಗೆ ಸ್ಪರ್ಧಿಸಲುದಾರಿ ಸುಗಮವಾದಂತಾಗಿದೆ. ಮಸ್ಕಿ ಕ್ಷೇತ್ರದ ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಸಲ್ಲಿಸಿದ ಪ್ರಕರಣದ ಬಗ್ಗೆ ಬಸನಗೌಡ ಪ್ರತಿಕ್ರಿಯೆ ನೀಡಲು ಈಗ ನಿರಾಕರಿಸುತ್ತಿದ್ದಾರೆ.
ಕಾಡಾ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬಾರದು ಎಂದು ಬಿಜೆಪಿ ಬೆಂಬಲಿಗರು ಬಸವನಗೌಡ ಅವರ ಮನೆ ಎದುರು ಸೋಮವಾರ ಕೆಲಕಾಲ ಪ್ರತಿಭಟನೆ ನಡೆಸಿದರು. ಕಾಡಾ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರವು ಅಕ್ಟೋಬರ್ 9 ರಂದು ನೇಮಕಗೊಳಿಸಿ ಆದೇಶಿಸಿತ್ತು.