ಮಾಜಿ– ಭಾವಿ(!?)ಯವರೇ, ನಾನೊಬ್ಬ ಬಡ ರೈತ. ಮೊನ್ನೆ ನಿಮಗೆ ‘ರೈತಬಂಧು’ ಎಂಬ ಬಿರುದು ಕೊಟ್ಟು ಜೊತೆಗೆ ನೇಗಿಲು ಹಾಗೂ ಹಸಿರು ಶಾಲನ್ನೂ ಕೊಟ್ಟಿರುವುದನ್ನು ನೋಡಿದೆ. ಇದಾದ ಮೇಲೆ ನನ್ನೊಳಗೆ ಮೂಡಿದ ಮನವಿಯೊಂದನ್ನು ಬಿನ್ನವಿಸಿಕೊಳ್ಳುತ್ತಿದ್ದೇನೆ.
ಬಿತ್ತನೆ ಬೀಜ, ರಸಗೊಬ್ಬರ, ಬೆಂಬಲ ಬೆಲೆ, ಸಮೃದ್ಧ ನೀರು, ಸಾಲ ಮನ್ನಾ, ನೆರೆ– ಬರ ಪರಿಹಾರ... ಯಾವುದನ್ನೂ ನಾನು ಕೇಳುತ್ತಿಲ್ಲ. ನನ್ನ ಮನವಿ ಎಂದರೆ, ‘ಮೊನ್ನೆ ನಿಮಗೆ ಕೊಟ್ಟ ನೇಗಿಲನ್ನು ನೀವು ಖಂಡಿತಾ ಹಿಡಿದು ಓಡಾಡುವುದು ಬೇಡ’ ಎಂಬುದು.
ಪಕ್ಷದ ಕೆಲಸಕ್ಕಾಗಿ ನಿಮಗೆ ಹೆಚ್ಚು ತಿರುಗಾಟ ಇರುವುದರಿಂದ, ನಿಮ್ಮ ಪರವಾಗಿ ನಾನೇ ಸದಾ ನೇಗಿಲು ಹಿಡಿದಿರುತ್ತೇನೆ– ನನ್ನ ಜಮೀನಿನಲ್ಲಿ. ಆದರೆ ನಿಮಗೆ ಕೊಡಮಾಡಿದ ಹಸಿರು ಶಾಲನ್ನು ದಯವಿಟ್ಟು ನಿಮ್ಮ ಜೀವಿತಾವಧಿವರೆಗೂ ಹೆಗಲಿನಿಂದ ಇಳಿಸಬೇಡಿ. ಅದು ರೈತನೊಬ್ಬನಿಗೆ ಕೊಡುವ ಗೌರವವೆಂದೇ ನಾನು ಭಾವಿಸುತ್ತೇನೆ. ನನ್ನ ಪುಟ್ಟ ಕೋರಿಕೆಯನ್ನು ನೆರವೇರಿಸುವಿರಾ? -ಇಂತಿ ನಿಮ್ಮ ಬಡ ರೈತ,
ನಗರ ಗುರುದೇವ್ ಭಂಡಾರ್ಕರ್, ಹೊಸನಗರ