ಚಿಕ್ಕಮಗಳೂರು: ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರ ಇನ್ನೋವಾ ಕಾರು ಶುಕ್ರವಾರ ಸಂಜೆ ತಾಲ್ಲೂಕಿನ ಮುಳ್ಳಯ್ಯನಗಿರಿ ಮಾರ್ಗದ ಗಿರಿಶ್ರೇಣಿಯ ಚೆನ್ನಗೊಂಡನಹಳ್ಳಿ ತಿರುವಿನಲ್ಲಿ ಅಪಘಾತಕ್ಕೀಡಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ.
ಎದುರಿನಿಂದ ಬರುತ್ತಿದ್ದ ಫೋರ್ಡ್ ಐಕಾನ್ ಮತ್ತು ಇನ್ನೋವಾ ನಡುವೆ ಡಿಕ್ಕಿ ಸಂಭವಿಸಿತು. ಫೋರ್ಡ್ ಕಾರಿನಲ್ಲಿ ಹಾಸನದ ನಾಲ್ವರು ಯುವಕರು ಇದ್ದರು. ಎರಡೂ ಕಾರುಗಳು ಚಿಕ್ಕದಾಗಿ ಜಖಂಗೊಂಡಿವೆ.
ಇದೇ 28ರಂದು ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನದ ನಿಮಿತ್ತ ಇನಾಂ ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ಸಿದ್ಧತೆ ಪರಿಶೀಲಿಸಲು ಅವರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ‘ಪ್ರಜಾವಾಣಿ’ ಜತೆ ಮಾತನಾಡಿ, ‘ಮಧ್ಯಾಹ್ನ 3.30ರ ವೇಳೆಗೆ ಅಪಘಾತವಾಯಿತು. ನನಗೆ ಯಾವುದೇ ಗಾಯವಾಗಿಲ್ಲ, ಚೆನ್ನಾಗಿದ್ದೇನೆ’ ಎಂದರು.
‘ಅಪಘಾತದ ಬಗ್ಗೆ ಈವರೆಗೆ ಯಾರೂ ದೂರು ದಾಖಲಿಸಿಲ್ಲ’ ಎಂದು ಗ್ರಾಮಾಂತರ ಠಾಣೆ ಪಿಎಸ್ಐ ಗವಿರಾಜ್ ತಿಳಿಸಿದ್ದಾರೆ.