‘ಮಾತಲ್ಲ, ಚಿಂತನೆ ಮುಖ್ಯ’ (ಶೂದ್ರ ಶ್ರೀನಿವಾಸ್, ವಾ.ವಾ., ಜ. 29), ‘ಬಡ ಬಡ ಮಾತಾಡುವುದೇ ಮಾತಿನ ಕಲೆಗಾರಿಕೆಯಲ್ಲ’ ಎಂಬ ಮಾತು ಚಿಂತನಾರ್ಹವಾಗಿದೆ. ಆದರೆ ಹಾಗೆ ‘ಬಡ ಬಡಿಸು’ವವರನ್ನೆ ‘ವಾಗ್ಮಿ’ಗಳೆಂದು ಲೋಕ ಪರಿಗಣಿಸುತ್ತದೆ!
ವಾಸ್ತವವಾಗಿ, ವಾಗ್ಮಿತೆಯ ಲಕ್ಷಣವೇನು? ‘ಮಿತಂ ಚ ಸಾರಂ ಚ ವಚೋ ಹಿ ವಾಗ್ಮಿತಾ’ (ಮಿತವಾದ, ಸಾರವತ್ತಾದ ಮಾತುಗಾರಿಕೆಯೇ ವಾಗ್ಮಿತೆ). ಈ ದೃಷ್ಟಿಯಿಂದ ಕುವೆಂಪು ವಾಗ್ಮಿಯಾಗಿದ್ದರು. ನಿರರ್ಗಳ ಮಾತುಗಾರರಲ್ಲದಿದ್ದರೂ.
‘ಮಾತಿನ ಕಲೆಗಾರಿಕೆ’, ಚಿಂತನೆಯ ಸೌಷ್ಠವ ಎರಡನ್ನೂ ಉಳ್ಳವರು ಶ್ರೇಷ್ಠ ವಾಗ್ಮಿಗಳಾಗುತ್ತಾರೆ. ಅಂಥವರು ವಿರಳ. ಬುಡುಬುಡುಕೆಯಂತೆ ಬಡ ಬಡ ಮಾತನಾಡುವವರು ವಾಚಾಳಿಗಳಷ್ಟೆ, ವಾಗ್ಮಿಗಳಲ್ಲ!