ಬೆಂಗಳೂರು: ಹಲಸೂರು ಗೇಟ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್ ಪಿ.ವಿ. ವಿಶ್ವನಾಥ್ ಅವರನ್ನು ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ವಿಶ್ವನಾಥ್ ಕೆಲಸದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಇಲಾಖೆಯೇ ಅವರನ್ನು ರಾಯಭಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಿ ಈಚೆಗೆ ಆದೇಶ ಹೊರಡಿಸಿತ್ತು. ಅದರಂತೆ ವಿಶ್ವನಾಥ್, ಜರ್ಮನಿಯಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ.
ಆ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಪಿ.ವಿ. ವಿಶ್ವನಾಥ್ ಅವರ ಸಾಧನೆಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ’ ಎಂದಿದ್ದಾರೆ. ಅದನ್ನು ಮರು ಟ್ವೀಟ್ ಮಾಡಿರುವ 175 ಮಂದಿ, ‘ಕನ್ನಡಿಗರಾದ ವಿಶ್ವನಾಥ್, ಜರ್ಮನಿಯಲ್ಲಿ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ’ ಎಂದು ಹೊಗಳಿದ್ದಾರೆ.