ಬಂಗಾರಪೇಟೆ: ನಿತ್ಯ ಸಂಜೆಯಾದರೆ ಪಟ್ಟಣದಲ್ಲಿ ಪಾನಿಪೂರಿ ಘಮಘಮ. ಸಾವಿರಾರು ಜನರು ಅಂಗಡಿಗಳು ಮುಂದೆ ನಿಂತು ಖುಷಿಯಿಂದ ಪಾನಿಪೂರಿ ಸವಿಯುತ್ತಿದ್ದ ದೃಶ್ಯ ಪಟ್ಟಣದ ಎಲ್ಲೆಡೆ ವಾರಕ್ಕೆ ಹಿಂದೆ ನಿತ್ಯ ಕಂಡುಬರುತ್ತಿತ್ತು.
ಇಲ್ಲಿನ ಪಾನಿಪೂರಿ ಎಂದರೆ ಬಹುತೇಕ ಜನರ ಬಾಯಲ್ಲಿ ನೀರೂರಿಸುತ್ತದೆ. ಎಷ್ಟೋ ಜನರ ಆಹಾರ ಪದ್ಧತಿಯನ್ನೇ ಬದಲಾಯಿಸಿತ್ತು ಎಂದರೆ ತಪ್ಪಿಲ್ಲ.
ಹಲ ಕುಟುಂಬಕ್ಕೆ ಪಾನಿಪೂರಿ ಆಹಾರದ ಒಂದು ಭಾಗವಾಗಿಬಿಟ್ಟಿತ್ತು. ಊಟ ಇಲ್ಲದಿದ್ದರೆ ತಲೆ ಕೆಡಿಸಿಕೊಳ್ಳತ್ತಿರಲಿಲ್ಲ. ಆದರೆ ಪಾನಿಪುರಿ ಇಲ್ಲದೆ ಮಲಗುತ್ತಿರಲಿಲ್ಲ.
ಆದರೆ ಈಗ ಪಟ್ಟಣದಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಚಿಟ್ಚಾಟ್ಸ್ ಅಂಗಡಿಗಳು ಲಾಕ್ ಆಗಿದೆ. ನಿತ್ಯ ಪಾನಿಪೂರಿ ಸವಿಯುತ್ತಿದ್ದ ನಾಗರಿಕರು ಈಗ ಸಪ್ಪೆಮೊರೆ ಹಾಕಿದ್ದಾರೆ. ಇಷ್ಟವಾದ ಖಾದ್ಯ ಸಿಗುತ್ತಿಲ್ಲ ಎಂದು ಪರಿತಪಿಸುವಂತಾಗಿದೆ.
‘ಬಂಗಾರಪೇಟೆ ಪಾನಿಪೂರಿ’ ಖಾದ್ಯ ಮೊದಲಿಗೆ ತಯಾರಾದದ್ದೇ ಇಲ್ಲಿ. ಅದು ಪಟ್ಟಣದಲ್ಲಿ ಎಷ್ಟರಮಟ್ಟಿಗೆ ವಿಸ್ತರಿಸಿದೆ ಎಂದರೆ ಹವಾನಿಯಂತ್ರಿತ ಪಾನಿಪುರಿ ಅಂಗಡಿಗಳು ತಲೆಎತ್ತಿವೆ.
ಮತ್ತೊಂದೆಡೆ ಪಾನಿಪೂರಿ ಅಂಗಡಿ ಮಾಲೀಕರೂ ಚಿಂತೆಗೆ ಜಾರಿದ್ದಾರೆ. ಜೀವನಕ್ಕೆ ಅಂಗಡಿಯನ್ನೇ ನೆಚ್ಚಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾದಿಂದ ಯಾವಾಗ ಮುಕ್ತಿ ಸಿಗಲಿದೆ ಎಂದು ಕಾಯುತ್ತಿದ್ದಾರೆ.
ಲಾಕ್ಡೌನ್ನಿಂದ ಅಂಗಡಿ ತೆರೆಯಲಾಗುತ್ತಿಲ್ಲ. ಸುಮ್ಮನೆ ಇರಲೂ ಸಾಧ್ಯವಾಗುತ್ತಿಲ್ಲ. ಜೀವನಕ್ಕೆ ಏನು ಮಾಡುವುದು ತಿಳಿಯುತ್ತಿಲ್ಲ ಎನ್ನುತ್ತಾರೆ ಪಾನಿಪೂರಿ ಅಂಗಡಿ ಮಾಲೀಕ ಸುಬ್ರಮಣಿ.
ನಿತ್ಯ ಊಟ ತಿಂದರೂ ಪಾನಿಪುರಿ ಸವಿದರೇನೆ ತೃಪ್ತಿ. ವಾರದಿಂದ ಅದು ಇಲ್ಲದೆ ಏನೇ ತಿಂಡಿ ತಿಂದರೂ ಮನಸ್ಸಿಗೆ ಹಿಡಿಯುತ್ತಿಲ್ಲ ಎನ್ನುತ್ತಾರೆ ರೇಖಾ.