ಬೆಂಗಳೂರು: ಕೋವಿಡ್ ಹರಡುತ್ತಿರುವುದನ್ನು ನಿಯಂತ್ರಿಸಲು ಬೆಂಗಳೂರನ್ನು ಎಂಟು ವಲಯಗಳಾಗಿ ವಿಂಗಡಿಸಿ ಅವುಗಳ ಉಸ್ತುವಾರಿಯನ್ನು ಏಳು ಸಚಿವರು ಹಾಗೂ ಒಬ್ಬರು ರಾಜಕೀಯ ಕಾರ್ಯದರ್ಶಿಗೆ ವಹಿಸಲಾಗಿದೆ.
ಸೋಂಕು ಹೆಚ್ಚುತ್ತಿರುವ ಬಗ್ಗೆ ಸಚಿವಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಕೊರೊನಾ ಹಿಮ್ಮೆಟ್ಟಿಸಲು ಎಲ್ಲ ಸಚಿವರೂ ಗಂಭೀರವಾಗಿ ಕಾರ್ಯನಿರ್ಹಿಸಬೇಕೆಂದು ಮುಖ್ಯಮಂತ್ರಿ ಸೂಚಿಸಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ರಾಜಧಾನಿಯಲ್ಲಿ ಕೋವಿಡ್ ಪಿಡುಗನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಚಿವರು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜತೆಗೆ ಐಎಎಸ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಕಂಟೈನ್ಮೆಂಟ್ ವಲಯಗಳು ಸೇರಿ ಎಲ್ಲೆಡೆ ಬಿಗಿ ಕ್ರಮ, ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಚಿಕಿತ್ಸೆಗೆ ರೋಗಿಗಳ ಪರದಾಟ ತಪ್ಪಿಸುವ ಹೊಣೆ ಈ ಉಸ್ತುವಾರಿಗಳದ್ದಾಗಿದೆ.
ವಲಯಗಳ ಉಸ್ತುವಾರಿ: ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಟಿ.ಸೋಮಶೇಖರ್, ಆರ್.ಅಶೋಕ,ಎಸ್.ಸುರೇಶ್ ಕುಮಾರ್, ಬೈರತಿ ಬಸವರಾಜ್, ಕೆ.ಗೋಪಾಲಯ್ಯ, ವಿ.ಸೋಮಣ್ಣ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್.
ಐಎಎಸ್ ಅಧಿಕಾರಿಗಳು: ಬೆಂಗಳೂರು ಪೂರ್ವ– ತುಷಾರ್ ಗಿರಿನಾಥ್, ಪಶ್ಚಿಮ– ರಾಜೇಂದ್ರ ಕುಮಾರ್ ಕಟಾರಿಯಾ, ಬೊಮ್ಮನಹಳ್ಳಿ– ಪಿ.ಮಣಿವಣ್ಣನ್,ಯಲಹಂಕ– ನವೀನ್ರಾಜ್ ಸಿಂಗ್,ದಕ್ಷಿಣ– ಮುನೀಶ್ ಮೌದ್ಗಿಲ್,ಮಹದೇವಪುರ– ಡಾ.ಎನ್.ಮಂಜುಳಾ, ದಾಸರಹಳ್ಳಿ–ಪಿ.ಸಿ.ಜಾಫರ್ ಮತ್ತು ಆರ್.ಆರ್.ನಗರ– ಆರ್.ವಿಶಾಲ್.