ಬೆಂಗಳೂರು: ಸಾಲದ ‘ಇಎಂಐ’ ಕಂತು ಮುಂದೂಡುವ ಸೋಗಿನಲ್ಲಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಐಪಿಎಸ್ ಅಧಿಕಾರಿ ಡಿ. ರೂಪಾ ಟ್ವೀಟ್ ಮಾಡಿದ್ದಾರೆ.
ಇಎಂಐ ಕಂತು ಪಾವತಿಗೂ ಆರ್ಬಿಐ ರಿಯಾಯಿತಿ ನೀಡಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು, ಬ್ಯಾಂಕ್ ಹಾಗೂ ಇತರೆ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ವಂಚಿಸುತ್ತಿದ್ದಾರೆ.
‘ಹೊಸ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಇಎಂಐ ಮುಂದೂಡುವುದಾಗಿ ಹೇಳಿಕೊಂಡು ಕೆಲವರು ಸಾರ್ವಜನಿಕರಿಗೆ ಕರೆ ಮಾಡುತ್ತಿದ್ದಾರೆ. ಬ್ಯಾಂಕ್ ಖಾತೆ ವಿವರ ಹಾಗೂ ಒಟಿಪಿ (ಒನ್ ಟೈಂ ಪಾಸ್ವರ್ಡ್) ಕೇಳುತ್ತಿದ್ದಾರೆ. ಒಟಿಪಿ ಅವರ ಕೈಗೆ ಸಿಗುತ್ತಿದ್ದಂತೆ ಸಾರ್ವಜನಿಕರ ಬ್ಯಾಂಕ್ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದಾರೆ’ ಎಂದು ರೂಪಾ ಹೇಳಿದ್ದಾರೆ.