ದಾವಣಗೆರೆ: ಯುವ ಮತದಾರರ ಸೆಳೆಯಲು ಸೇನೆ ಸಾಧನೆಯನ್ನು ಬಳಸಿಕೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
‘ಪಾಕಿಸ್ತಾನದ ಮೇಲೆ ದಾಳಿ ಮಾಡಿದ್ದೇನೆ. ಮತ ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಉದ್ಯೋಗ ನೀಡಿದ್ದೇನೆ ಮತ ನೀಡಿ ಎಂದು ಏಕೆ ಯುವಕರನ್ನು ಕೇಳುತ್ತಿಲ್ಲ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಚುನಾವಣಾ ಆಯೋಗವೂ ಎಲ್ಲಾ ತನಿಖಾ ಸಂಸ್ಥೆಗಳಂತೆ ಮೋದಿ ಅವರ ನಿಯಂತ್ರಣದಲ್ಲಿರುವಂತೆ ತೋರುತ್ತಿದೆ. ಆಯೋಗಕ್ಕೆ ದೂರು ಸಲ್ಲಿಸಿದರೂ ನ್ಯಾಯ ಸಿಗುವುದಿಲ್ಲ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.
‘ಆದಾಯ ತೆರಿಗೆ ಇಲಾಖೆ ಮೂಲಕ ಪ್ರತಿಪಕ್ಷಗಳನ್ನು ಹೆದರಿಸುವ ಮೋದಿ, ನೂರಾರು ಕೋಟಿ ಹಣ ಇಟ್ಟುಕೊಂಡು ಆಪರೇಷನ್ ಕಮಲ ಮಾಡುತ್ತಿರುವ ಬಿ.ಎಸ್. ಯಡಿಯೂರಪ್ಪ ಮೇಲೆ ಐಟಿ ದಾಳಿ ಮಾಡಿಸಲಿ’ ಎಂದು ಸವಾಲು ಹಾಕಿದರು.
ರಫೇಲ್ ಹಗರಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೈಲಿಗೆ ಹೋಗುವುದು ಖಚಿತ. ಸುಪ್ರೀಂ ಕೋರ್ಟ್ಗೆ ರಫೇಲ್ ದಾಖಲೆ ಕಳವಾಗಿದೆ ಎಂದು ಸರ್ಕಾರ ಹೇಳಿತ್ತು. ಅದನ್ನು ನ್ಯಾಯಾಲಯ ಒಪ್ಪಿಲ್ಲ. ಅನಿಲ್ ಅಂಬಾನಿಗೆ ಅನುಕೂಲ ಮಾಡಿಕೊಡಲು ರಫೇಲ್ ಮಾತುಕತೆಯಲ್ಲಿ ಮೋದಿ ಹಸ್ತಕ್ಷೇಪ ಮಾಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.