ಬೆಂಗಳೂರು: ರಾಜ್ಯದ 100 ತಾಲ್ಲೂಕುಗಳಲ್ಲಿನ ಬರ ಪರಿಸ್ಥಿತಿ ಮತ್ತು ಬೆಳೆ ನಷ್ಟದ ಬಗ್ಗೆ ವರದಿ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲು, ಸಮೀಕ್ಷೆ ಕಾರ್ಯಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದೆ.
ಬರಪೀಡಿತ ಮತ್ತು ಬರದ ಛಾಯೆ ಕಾಣಿಸಿಕೊಂಡಿರುವ ತಾಲ್ಲೂಕುಗಳಿಗೆ ಈಗಾಗಲೇ ಅಧಿಕಾರಿಗಳು ತೆರಳಿ ಸಮೀಕ್ಷೆ ಕಾರ್ಯ ಆರಂಭಿಸಿದ್ದಾರೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಕುಡಿಯುವ ನೀರಿನ ಸಮಸ್ಯೆ, ಮೇವಿನ ಅಭಾವ ಮತ್ತು ಬೆಳೆ ನಷ್ಟವನ್ನು ಅಂದಾಜು ಮಾಡಲಾಗುತ್ತಿದೆ. ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ನೆರವನ್ನು ಪಡೆಯುವುದರ ಜೊತೆಗೆ, ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಸಮೀಕ್ಷೆಯಿಂದ ಮಾಹಿತಿ ಸಿಗುತ್ತದೆ.
₹ 720 ಕೋಟಿ ಬೇಡಿಕೆ: ಕೊಡಗು ಮತ್ತುಇತರ ಜಿಲ್ಲೆಗಳಲ್ಲಿನ ಪ್ರವಾಹದಿಂದ ಉಂಟಾದ ನಷ್ಟ ಭರಿಸಲು ₹ 720 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪರಿಷ್ಕೃತ ಮನವಿ ಸಲ್ಲಿಸಿದೆ.
ರಾಜ್ಯದ ಮನವಿಯು ಕೇಂದ್ರ ಸರ್ಕಾರದ ಉನ್ನತಾಧಿಕಾರಿ ಸಮಿತಿಯ ಮುಂದೆ ಬಂದಿದ್ದು, ಕೆಲವೇ ದಿನಗಳಲ್ಲಿ ಹಣ ಬಿಡುಗಡೆಯ ಬಗ್ಗೆ ಸಮಿತಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
‘ಸಾಮಾನ್ಯವಾಗಿ ನಾವು ಕೇಳಿದಷ್ಟು ಹಣವನ್ನು ನೀಡುವುದಿಲ್ಲ. ₹250ರಿಂದ ₹ 300 ಕೋಟಿ ಪರಿಹಾರ ಸಿಗುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.