ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯ ಎಲ್ಲ ಸೇವೆಯೂ ಆನ್‌ಲೈನ್‌

ಮೇ 1 ರಿಂದಲೇ ಜಾರಿ * ಕಾಗದ ರಹಿತವಾಗಲಿದೆ ಸಾರ್ವಜನಿಕ ಶಿಕ್ಷಣ ಇಲಾಖೆ
Last Updated 20 ಏಪ್ರಿಲ್ 2019, 18:35 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ಡಿಜಿಟಲೀಕರಣ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇಲಾಖೆಯ ಪ್ರತಿಯೊಂದು ಸೇವೆ ಇನ್ನು ಮುಂದೆ ಕಾಗದ ಮುಕ್ತವಾಗಲಿದ್ದು, ಆನ್‌ಲೈನ್‌ ಮೂಲಕವೇ ನಡೆಯಲಿದೆ.

ಇಲಾಖೆಯ ಗ್ರೂಪ್‌ ‘ಎ’ ಮತ್ತು ‘ಬಿ‘ ಅಧಿಕಾರಿಗಳು ಹಾಗೂ ವೃಂದದ ಬೋಧಕ ಮತ್ತು ಬೋಧಕೇತರ ನೌಕರರ ಸೇವಾ ಸೌಲಭ್ಯಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸುವ ಸಂಬಂಧ ಜ್ಞಾಪನ ಪತ್ರ ಹೊರಡಿಸಲಾಗಿದ್ದು, ಮೇ 1ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ.

ವಿವಿಧ ರಜಾ ಸೌಲಭ್ಯಗಳು, ಪಾಸ್‌ಪೋರ್ಟ್‌ ಪಡೆಯಲು ಮತ್ತು ವಿದೇಶ ಪ್ರವಾಸಕ್ಕೆ ನಿರಾಪೇಕ್ಷಣಾ ಪತ್ರ, ಶಿಸ್ತು ಪ್ರಕರಣಗಳು ಮತ್ತು ದೂರುಗಳನ್ನು ನೀಡಲು, ಪ್ರಭಾರ ಭತ್ಯೆ, ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ, ಅರ್ಹತಾದಾಯಕ ಸೇವೆ ಸೇರ್ಪಡೆಗೆ ಅನುಮೋದನೆ, ಕಾಲಮಿತಿ ವೇತನ ಬಡ್ತಿ, ಸ್ವಯಂ ಚಾಲಿನ ವೇತನ ಬಡ್ತಿ, ಹೆಚ್ಚುವರಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಗೆ ಅನುಮತಿ, ಉನ್ನತ ವ್ಯಾಸಂಗಕ್ಕೆ ಮಂಜೂರಾತಿ ಸೇರಿ ಎಲ್ಲ ಸೇವೆ ಮತ್ತು ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕವೇ ನಡೆಸಬೇಕು.

ಇಲಾಖೆ ದೊಡ್ಡದಾಗಿ ಬೆಳೆದಿದ್ದು, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಲಿ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸೇವೆಗಳನ್ನು ತ್ವರಿತಗತಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ವಿವಿಧ ಹಂತಗಳಲ್ಲಿ ನಿಯಂತ್ರಣಾಧಿಕಾರಿಗಳ ಮೂಲಕ ಇಲಾಖಾ ಮುಖ್ಯಸ್ಥರಿಗೆ ಹಾಗೂ ಕೆಲವು ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕಾಗುತ್ತದೆ. ಕಾರ್ಯಭಾರದ ಕಾರಣಗಳಿಂದ ಅನುಮತಿ ನೀಡುವುದು ವಿಳಂಬವಾಗುತ್ತಿದೆ. ಇದರಿಂದ ಅಧಿಕಾರಿಗಳಿಗೆ ಆಡಳಿತ ಮತ್ತು ಕಚೇರಿ ಸಿಬ್ಬಂದಿ ವರ್ಗದವರಿಗೆ ದೈನಂದಿನ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಆದ್ದರಿಂದ, ಎಲ್ಲ ಸೌಲಭ್ಯಗಳನ್ನೂ ಆನ್‌ಲೈನ್‌ ಮೂಲಕವೇ ನೀಡಲಾಗುವುದು. ಇದಕ್ಕೆ ಅಗತ್ಯವಿರುವ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮಿತವ್ಯಯ ಸಾಧಿಸಲು ಅನುಕೂಲವಾಗಲಿದೆ.

ಪಾಸ್‌ಪೋರ್ಟ್‌, ವಿದೇಶ ಪ್ರವಾಸ ನಿರಾಕ್ಷೇಪಣಾ ಪತ್ರ: ಪಾಸ್‌ಪೋರ್ಟ್‌ ನವೀಕರಿಸಲು ನಿರಾಕ್ಷೇಪಣಾ ಪತ್ರ ಕೋರುವ ಮನವಿ ಹಾಗೂ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ಸಲ್ಲಿಸುವ ಅರ್ಜಿಗಳಿಗೆ ಸಕಾಲದಲ್ಲಿ ಒಪ್ಪಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಇಂಥ ಪ್ರಸ್ತಾವನೆಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸಬಹುದಾಗಿದೆ.

ಅಲ್ಲದೆ, ಬೋಧಕ/ ಬೋಧಕೇತರ ಸಿಬ್ಬಂದಿ, ಎಲ್ಲ ವೃಂದದ ಅಧಿಕಾರಿಗಳು ಮತ್ತು ನೌಕರರ ವಿರುದ್ಧದ ಶಿಸ್ತು ಪ್ರಕರಣಗಳು ಮತ್ತು ದೂರುಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು.

ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ: ಶಾಲೆಗಳು, ಶಿಕ್ಷಕರ ತರಬೇತಿ ಕೇಂದ್ರಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಮೇಲುಸ್ತುವಾರಿಗಾಗಿ ಅಧಿಕಾರಿಗಳು ಪ್ರವಾಸ ಕೈಗೊಳ್ಳಬೇಕಾಗಿದೆ. ಪ್ರತಿ ತಿಂಗಳ 28ನೇ ತಾರೀಕಿನ ಒಳಗೆ ಪ್ರವಾಸಿ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಪ್ರವಾಸಿ ದಿನಚರಿಯನ್ನು ದಾಖಲೆಗಳೊಂದಿಗೆ ನಿಯಂತ್ರಣಾಧಿಕಾರಿಗಳಿಗೆ ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ನೀಡಬೇಕು. ಈ ಸಂಬಂಧ ಪ್ರಕ್ರಿಯೆಗಳನ್ನು ಸರಳೀಕರಿಸಲು ಹಾಗೂ ತ್ವರಿತಗೊಳಿಸಲು ಆನ್‌ಲೈನ್‌ ಮೂಲಕವೇ ವ್ಯವಹರಿಸಬೇಕು.

ಕೆಸಿಎಸ್‌ ಸೇವಾ ನಿಯಮದಂತೆ 10 ವರ್ಷಗಳ ಕಾಲ ಮಿತಿ ವೇತನ ಬಡ್ತಿ, 15 ವರ್ಷ ಸ್ವಯಂ ಚಾಲಿತ ವೇತನ ಬಡ್ತಿ, 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿ, ಹೆಚ್ಚುವರಿ ವೇತನ ಬಡ್ತಿ, ವಿಶೇಷ ವೇತನ ಬಡ್ತಿ, ಅಂಗವಿಕಲ ಬಡ್ತಿ ವಿಚಾರಗಳನ್ನು ಆನ್‌ಲೈನ್‌ ಮೂಲಕವೇ ಇತ್ಯರ್ಥಪಡಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT