ಕುಶಾಲನಗರ: ಅತ್ತೂರು ಮೀಸಲು ಅರಣ್ಯ ವ್ಯಾಪ್ತಿಯ, ಮೈಸೂರು–ಮಡಿಕೇರಿ ಹೆದ್ದಾರಿ ಪಕ್ಕದ ಕೆರೆಗೆ ಇಳಿದಿದ್ದ ಒಂದು ತಿಂಗಳ ಗಂಡು ಮರಿಯಾನೆಯೊಂದು, ನೀರಿನಲ್ಲಿ ಮುಳುಗಿ ಮಂಗಳವಾರ ರಾತ್ರಿ ಮೃತಪಟ್ಟಿದೆ.
ತಾಯಿ ಆನೆ ಹಾಗೂ ಹಿಂಡಾನೆಗಳ ಜೊತೆಗೆ ಕೆರೆಗೆ ಇಳಿದಿದ್ದ ಮರಿಯಾನೆ ಕೆಸರಿನಲ್ಲಿ ಸಿಲುಕಿಹಾಕಿಕೊಂಡಿದೆ. ಇದರಿಂದ ಆಘಾತಗೊಂಡ ಆನೆಗಳು ರಾತ್ರಿಯಿಡೀ ಘೀಳಿಡುತ್ತಾ ಕೆರೆ ಬಳಿ ಕಾವಲು ಕಾದಿವೆ. ಬುಧವಾರ ಬೆಳಿಗ್ಗೆ ಹೊತ್ತಿಗೆ ಮರಿಯಾನೆಯನ್ನು ಬಿಟ್ಟು ಕಾಡಿಗೆ ಹೋಗಿವೆ.
ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರೂ ಹಾಗೂ ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು.