ರಾಯಚೂರು: ಪರೀಕ್ಷಾ ಕೇಂದ್ರದ ಬದಲು ಬಾಡಿಗೆ ಮನೆಯೊಂದರಲ್ಲಿ ಪದವಿ ಪರೀಕ್ಷೆ ಬರೆದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ ಚೇತನ ಕಾಲೇಜಿನ 39 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳಿಗೆ ಇಲ್ಲಿಯಒಂದನೇ ಜೆಎಂಎಫ್ ನ್ಯಾಯಾಲಯ ಸೋಮವಾರ ಜಾಮೀನು ನೀಡಿದೆ.
ಬಂಧಿತರ ಪೈಕಿ ಚೇತನ ಕಾಲೇಜಿನ ಮುಖ್ಯಸ್ಥ ಪವನಕುಮಾರ್ ಹನುಮಂತ ಹಾಗೂ ಸಹಾಯಕ ನಿರಂಜನ ನರೇಶಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಪರೀಕ್ಷಾ ಕೇಂದ್ರಗಳು ರದ್ದು: ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಒಳಪಡುವ ನಗರದ ಮೂರು ಕಾಲೇಜು ಗಳ ಪರೀಕ್ಷಾ ಕೇಂದ್ರಗಳನ್ನು ರದ್ದುಪಡಿಸಲಾಗಿದ್ದು, ಅಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳನ್ನು ಬೇರೆ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗಿದೆ.
ವಿವೇಕಾನಂದ ಬಿಸಿಎ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ, ಡಿ.ಕೆ.ಭಂಡಾರಿ ಪದವಿ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರವನ್ನು ಎಎಂಇ ಕಾಲೇಜಿಗೆ ಹಾಗೂ ಜ್ಞಾನಗಂಗಾ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ಬಿಆರ್ಬಿ ಕಾಲೇಜಿನ ಪರೀಕ್ಷಾ ಕೆಂದ್ರಕ್ಕೆ ವರ್ಗಾಯಿಸಲಾಗಿದೆ.
ನಗರದಲ್ಲಿ ಪರೀಕ್ಷಾ ಅಕ್ರಮಕ್ಕೆ ಅವಕಾಶ ನೀಡಿದ ಕೇಂದ್ರಗಳಿಗೆ ಕುಲಪತಿ ಪ್ರೊ.ಎಸ್.ಆರ್. ನಿರಂಜನ ನೇತೃತ್ವದ ತನಿಖಾ ತಂಡವು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಂತರ ಮಾತನಾಡಿದ ನಿರಂಜನ, ‘ಅಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಮಗ್ರ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು. ಕಾಲೇಜು ಆಡಳಿತ ಮಂಡಳಿ ತಪ್ಪು ಎಸಗಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗು ವುದು’ ಎಂದರು.