ಬೀರೂರು: ಅಧಿಕಾರಕ್ಕೆ ಬಂದ ತಕ್ಷಣ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಕಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್.ಆನಂದ್ ಭರವಸೆ ವ್ಯಕ್ತಪಡಿಸಿದರು.
ಬೀರೂರು ಹೋಬಳಿ ಹೊಗರೇಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು.
ಪರಿಶಿಷ್ಟರಿಗೆ ನೀಡುವ ಗಂಗಾಕಲ್ಯಾಣ ಯೋಜನೆಯ ಸೌಲಭ್ಯವನ್ನು ಶಾಸಕರ ಹಿಂಬಾಲಕರು ₹ 50-60 ಸಾವಿರಕ್ಕೆ ಮಾರಿಕೊಂಡಿದ್ದಾರೆ. ಆಶ್ರಯ ಮನೆ ಕೊಡಿಸುವುದಾಗಿ ಪಟ್ಟಿ ತಯಾರಿಸಿ ಹಿಂಬಾಲಕರು ಹಣ ಪಡೆದಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಶಾಸಕರ ಏಜೆಂಟರು ಹಣ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಅವರು, ‘ಎಮ್ಮೆದೊಡ್ಡಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಸಕರು ಹತಾಶೆಯಿಂದ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆಗಳಿಂದ ಅವರು ನಮ್ಮನ್ನು ಕುಗ್ಗಿಸಬಹುದು ಎಂದುಕೊಂಡಿದ್ದರೆ ಅದು ಮೂರ್ಖತನ’ ಎಂದು ಹೇಳಿದರು.
ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ಹಳ್ಳಿಯಿಂದ ದಿಲ್ಲಿಯವರೆಗೂ ಸದೃಢ ವಾಗಿದೆ, ಸರ್ಕಾರ, ಪಕ್ಷ ಮತ್ತು ಅಭ್ಯರ್ಥಿ ಸಮರ್ಥವಾಗಿದ್ದು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.
ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ವಿನಾಯಕ ಮಾತನಾಡಿ, ಬೆಂಗಳೂರು-ಕಡೂರು ನಡುವೆ ಸಂಚರಿಸುವ ‘ವೀಕೆಂಡ್’ ಶಾಸಕರಾಗಿದ್ದ ಅವರು ಚುನಾವಣೆ ಸಲುವಾಗಿ ನೀರು ತರುವ ನಾಟಕವಾಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಕೂಡಾ ದ್ವೇಷ ರಾಜಕಾರಣ ಮಾಡುತ್ತಿದೆಯೇ ಹೊರತು ಜನರ ಸಂಕಷ್ಟಕ್ಕೆ ದನಿಯಾಗಲಿಲ್ಲ’ ಎಂದು ದೂರಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಶಶಿಧರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ, ಕಿರಣ್ಕುಮಾರ್, ಎನ್.ಟಿ.ಮಂಜಪ್ಪ, ಕೃಷ್ಣಮೂರ್ತಿ, ಶಾಂತಕುಮಾರ್ ಮತ್ತಿತರರು ಕಾಂಗ್ರೆಸ್ ಸೇರ್ಪಡೆಯಾದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಹೇಶ್ ಒಡೆಯರ್, ಲೋಲಾಕ್ಷಿ ಬಾಯಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪ್ರೇಮಾಬಾಯಿ, ಚಂದ್ರಪ್ಪ, ಕೆ.ಎಚ್.ರಂಗನಾಥ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಚ್.ಚಂದ್ರಪ್ಪ, ಕಿಸಾನ್ಸೆಲ್ನ ಪ್ರಕಾಶ್ ಇದ್ದರು.