ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ₹ 25 ಲಕ್ಷ ಬಹುಮಾನ ಘೋಷಿಸುವಂತೆ ಕೋರಿ ತಂಡದ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ.
ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಏಪ್ರಿಲ್ 12ರಂದು ಪತ್ರ ರವಾನಿಸಲಾಗಿದ್ದು, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
‘ಗೌರಿ ಹತ್ಯೆ ಪ್ರಕರಣ ಸಂಬಂಧ ಒಂದು ವರ್ಷ ತನಿಖೆ ನಡೆಸಿದ್ದ ಎಸ್ಐಟಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ತನಿಖೆಯಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಚಾರವಾದಿಗಳ ಹತ್ಯೆಗೂ ಸುಳಿವುಗಳು ಸಿಕ್ಕಿವೆ. ಆಯಾ ಪೊಲೀಸರು, ಎಸ್ಐಟಿಯಿಂದ ಮಾಹಿತಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ’ ಎಂದು ಸಿಂಗ್ ಹೇಳಿದ್ದಾರೆ.
‘ಆರೋಪಿಗಳಿಗೆ ಶಿಕ್ಷೆಯಾಗುವಂತೆ ಎಲ್ಲ ಪುರಾವೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೂ ಸಲ್ಲಿಸಿದೆ. ಇಂಥ ತಂಡವನ್ನು ಪ್ರೋತ್ಸಾಹಿಸಲು ಬಹುಮಾನ ಘೋಷಣೆ ಮಾಡಬೇಕು’ ಎಂದು ಕೋರಿದ್ದಾರೆ.
ಬೆಂಗಳೂರು ಹೆಚ್ಚುವರಿ ಪೊಲೀಸ್ ಕಮಿಷನರ್ ಬಿ.ಕೆ. ಸಿಂಗ್ ಅವರ ನೇತೃತ್ವದಲ್ಲಿ ರಚಿಸಲಾದ ಎಸ್ಐಟಿಯಲ್ಲಿ ಐಪಿಎಸ್ ಅಧಿಕಾರಿಗಳಾದ ಎಂ.ಎನ್.ಅನುಚೇತ್, ಹರೀಶ್ ಪಾಂಡೆ, ಡಿವೈಎಸ್ಪಿಗಳಾದ ರಂಗಪ್ಪ, ಎನ್.ಬಿ. ಸಕ್ರಿ, ಜಗನ್ನಾಥ ರೈ ಹಾಗೂ 13 ಇನ್ಸ್ಪೆಕ್ಟರ್ಗಳು ಇದ್ದಾರೆ.