ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಹೆಯಲ್ಲಿ ರಾಜಕೀಯ: ಸಚಿವರಿಗೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ತಿರುಗೇಟು

Last Updated 15 ಮಾರ್ಚ್ 2020, 15:17 IST
ಅಕ್ಷರ ಗಾತ್ರ

ಬೆಂಗಳೂರು: ಕೊರೋನಾ ವೈರಸ್‌ ತಡೆಗೆ ಸಂಬಂಧಿಸಿದಂತೆ ತಾವು ಸರ್ಕಾರಕ್ಕೆ ನೀಡಿದ್ದ ಸಲಹೆಯನ್ನು ಟೀಕಿಸಿದ್ದ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಯಡಿಯೂರಪ್ಪ ಅವರ ನಡೆಯನ್ನೂ ಟೀಕಿಸಿದ್ದಾರೆ.

ಕುಮಾರಸ್ವಾಮಿ ತಿರುಗೇಟು

ಕೊರೋನಾ ವೈರಸ್ ಕುರಿತು ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದೆ. ಇದರಲ್ಲಿ ರಾಜಕೀಯ ಹುಡುಕಿರುವ ಸಚಿವರೊಬ್ಬರು ಸರ್ಕಾರ ಎಲ್ಲ ರೀತಿಯಲ್ಲೂ ಮುಂಜಾಗ್ರತಾ ಕ್ರಮಗಳನ್ನು ವಹಿಸಿರುವುದಾಗಿ ಹೇಳಿದ್ದಾರೆ. ಸರಿ, ಸಿಎಂ ಬಿಎಸ್ವೈ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗದೇ ನಿಯಮ ಉಲ್ಲಂಘಿಸಿದ್ದು ಯಾವ ಕ್ರಮ? ಕೊರೋನಾ ವೈರಸ್ ತಡೆಗೆ ಮುಂಜಾಗ್ರತೆಯೇ ಮದ್ದು. ಇದಕ್ಕಾಗಿಯೇ ಎಲ್ಲ ವಿಮಾನ ನಿಲ್ದಾಣಗಳಲ್ಲಿ, ಪ್ರತಿಯೊಬ್ಬರ ತಪಾಸಣೆ ನಡೆಯುತ್ತಿದೆ. ಈ ತಪಾಸಣೆಯನ್ನು ಮುಖ್ಯಮಂತ್ರಿಯೇ ನಿರ್ಲಕ್ಷಿಸುವುದು ಎಂಥ ಕಟ್ಟುನಿಟ್ಟಿನ ಕ್ರಮ? ಇದರಿಂದ ಜನರಿಗೆ ಹೋಗುವ ಸಂದೇಶವೇನು? ಈ ಬಗ್ಗೆ 'ರಾಜಕೀಯ' ಹುಡುಕಿದ ಸಚಿವರು ಏನು ಹೇಳುತ್ತಾರೆ?ವಿರೋಧ ಪಕ್ಷದ ನಾಯಕನಾದ ನಾನು ಸರ್ಕಾರಕ್ಕೆ ಸಲಹೆ ನೀಡುವುದು ನನ್ನ ಕರ್ತವ್ಯ, ನನ್ನ ಹಕ್ಕು. ಮತ್ತು, ಅದೇ ವೃತ್ತಿ ಧರ್ಮ‌. ರಾಜಕೀಯ ಮಾಡಲು ಬೇರೆ ಅವಕಾಶಗಳಿವೆ. ಅಲ್ಲಿ ಮಾಡೋಣ. ಈಗಲೂ ಹೇಳುತ್ತಿದ್ದೇನೆ ಇದು ನನ್ನ ಸಲಹೆ. ಇದರಲ್ಲಿಯೂ ರಾಜಕೀಯ ಹುಡುಕುವವರನ್ನು 'ಪ್ರಚಾರ ಪ್ರಿಯ'ರಷ್ಟೇ‌.

ಟೀಕೆ ಮಾಡಿದ್ದ ಸುಧಾಕರ್‌

ಕೊರೋನಾ ನಿರ್ವಹಣೆ ವಿಚಾರದಲ್ಲಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ರವರ ಬಾಲಿಶ ಹೇಳಿಕೆ ಗಮನಿಸಿದ್ದೇನೆ. ವಿಪತ್ತನ್ನು ಎದುರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶದಂತೆ ರಾಜ್ಯಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ನಾನು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಜನರಲ್ಲಿ ಜಾಗೃತಿ ಮೂಡಿಸುವುದು, ಸೊಂಕಿತರ ಪತ್ತೆಗೆ ಸರ್ವ ಪ್ರಯತ್ನ, ಸೋಂಕಿತರ ಚಿಕಿತ್ಸೆಗೆ ಎಲ್ಲ ಸೌಕರ್ಯ, ಪ್ರತ್ಯೇಕ ನಿಗಾ ಘಟಕಗಳು, ತಜ್ಞ ವೈದ್ಯರ ಮತ್ತು ಇತರ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದು, ಎಲ್ಲ ಮುಂಜಾಗ್ರತಾ ಕ್ರಮಗಳನ್ನು ರಾಜ್ಯಸರ್ಕಾರ ತೆಗೆದುಕೊಂಡಿದೆ. ಇದನ್ನು ಜನರೂ ಮೆಚ್ಚಿಕೊಂಡಿದ್ದಾರೆ. ಕುಮಾರಸ್ವಾಮಿ ಅವರಲ್ಲಿ ನನ್ನ ವಿನಂತಿಯೆಂದರೆ, ಈ ಸೂಕ್ಷ್ಮ ಪರಿಸ್ಥಿತಿಗಳಲ್ಲಿ ರಾಜಕೀಯ ಬದಿಗಿಟ್ಟು, ಜಾಗೃತಿ ಮೂಡಿಸುವ ಕೆಲಸದಲ್ಲಿ ಆದಷ್ಟು ಸಹಕರಿಸಿ. ತಾವು ಕೂಡ ಎಚ್ಚರಿಕೆಯಿಂದ ಇದ್ದು ಸುರಕ್ಷಿತವಾಗಿರಿ, ಇಂತಹ ಸಂದರ್ಭಗಳಲ್ಲಿ ಜನರಲ್ಲಿ ಆತಂಕ ಹೆಚ್ಚಿಸುವ ಯಾವುದೇ ಪ್ರಯತ್ನ ಅಪೇಕ್ಷಣೀಯವಲ್ಲ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT