ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಯಾವುದೇ ಎಂಜಿನಿಯರ್ಗಳು ಅತಂತ್ರ ಸ್ಥಿತಿಯಲ್ಲಿಲ್ಲ ಮತ್ತು ಅನ್ಯಾಯವೂ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
‘ಹಿಂಬಡ್ತಿ ಹೊಂದಿದ ಈ ವರ್ಗದ ಎಂಜಿನಿಯರ್ಗಳಿಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡುವ ಕೆಲಸ ಸುಗಮವಾಗಿಯೇ ನಡೆದಿದೆ. 215 ಎಂಜಿನಿಯರ್ಗಳಿಗೂ ಸ್ಥಳ ನಿಯುಕ್ತಿ ಮಾಡಲಾಗಿದೆ. 15 ಎಂಜಿನಿಯರ್ಗಳು ಅತಂತ್ರ ಸ್ಥಿತಿಯಲ್ಲಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ತಿಳಿಸಿದರು.
ರಾಜ್ಯದಲ್ಲಿ ₹ 8,000 ಕೋಟಿ ವೆಚ್ಚದಲ್ಲಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯ ನಡೆಯುತ್ತಿದೆ. ಇದರಿಂದ ಸುಮಾರು 16,000 ಕಿ.ಮೀ.ಗಳಷ್ಟು ರಸ್ತೆಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ ಆಗಲಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇದೇ 30ರೊಳಗೆ ಟೆಂಡರ್ ಕರೆಯಲಾಗುವುದು. ಜುಲೈ 1 ರಿಂದ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ರೇವಣ್ಣ ಹೇಳಿದರು.
ದತ್ತ ಹೇಳಿದ್ದರಲ್ಲಿ ತಪ್ಪಿಲ್ಲ: ಪ್ರಜ್ವಲ್ ಮತ್ತು ನಿಖಿಲ್ ತೆರೆಯ ಮರೆಯಲ್ಲಿ ಇರಬೇಕು ಎಂದು ಪಕ್ಷದ ನಾಯಕ ವೈ.ಎಸ್.ವಿ.ದತ್ತ ಅವರ ಹೇಳಿಕೆ ತಪ್ಪಿಲ್ಲ ಎಂದು ರೇವಣ್ಣ ತಿಳಿಸಿದರು.
‘ನನ್ನ ರಾಜಕೀಯ ಜೀವನದಲ್ಲಿ ಎಂದೂ ಅಧ್ಯಕ್ಷನೊ ಮತ್ತೊಂದೊ ಆಗಿಲ್ಲ. ನನಗೆ ಯಾವುದೇ ನಾಯಕತ್ವ ನೀಡಿಲ್ಲ. ಜನ ಸೇವೆ ಮಾಡುತ್ತಿಲ್ಲವೆ. ದೇವೇಗೌಡರು ಮತ್ತು ಪಕ್ಷ ಹೇಳಿದಂತೆ ಕೇಳಿಕೊಂಡು ಬಂದಿದ್ದೇನೆ’ ಎಂದು ಹೇಳಿದರು.