ಬಸವಕಲ್ಯಾಣ (ಬೀದರ್ ಜಿಲ್ಲೆ): ಇಲ್ಲಿಯ ಜಾಮಿಯಾ ಮಸೀದಿ ಸಮೀಪ ಛಿಲಾಗಲ್ಲಿಯಲ್ಲಿ ಹಳೆಯ ಮನೆಯೊಂದರ ಮಾಳಿಗೆ ಬುಧವಾರ ಬೆಳಗಿನ ಜಾವ ಕುಸಿದು ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ.
ಹಣ್ಣಿನ ವ್ಯಾಪಾರಿ ನದೀಮ್ ಶೇಖ ಯುಸೂಫ್ (45), ಫರೀದಾಬೇಗಂ (34), ಆಯಿಷಾಬೇಗಂ (15), ಮೆಹತಾಬಿ(14), ಗೌಸಿಯಾ (13), ಫೈಜಾನ್ಅಲಿ (6) ಹಾಗೂ ಫರಾನ್ಅಲಿ (4) ಮೃತಪಟ್ಟವರು.
ಮನೆಯ ಮಾಳಿಗೆಯ ಮೇಲೆ ಕಟ್ಟಿಗೆಯ ತೊಲೆಗಳನ್ನು ಜೋಡಿಸಿ ಅದರ ಮೇಲೆ ಮಣ್ಣು ಹಾಕಿ ಚಪ್ಪರ ನಿರ್ಮಿಸಲಾಗಿತ್ತು. ಎರಡು ದಿನಗಳ ಹಿಂದೆ ಸುರಿದ ಮಳೆಗೆ ಗೋಡೆ ನೆನೆದಿತ್ತು. ಬೆಳಗಿನ ಜಾವ ಛಾವಣಿ ಕುಸಿದಿದೆ. ಮನೆ ಮಂದಿಯೆಲ್ಲ ನಿದ್ರೆಯಲ್ಲಿದ್ದರು.
ಪೊಲೀಸರ ಸಹಾಯದಿಂದ ಶವಗಳನ್ನು ಹೊರಗೆ ತೆಗೆಯಲಾಗಿದೆ. ಕಿರಿದಾದ ಬೀದಿಯಲ್ಲಿ ಮನೆ ಇದ್ದ ಕಾರಣ ಅವಶೇಷಗಳನ್ನು ಹೊರಗೆ ತೆಗೆಯಲು ಸಾರ್ವಜನಿಕರು ಪ್ರಯಾಸ ಪಡಬೇಕಾಯಿತು. ಪಟ್ಟಣದ ಹೊರವಲಯದಲ್ಲಿ ಸಂಜೆ ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು.
ಸ್ಥಳಕ್ಕೆ ಭೇಟಿ ನೀಡಿದಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ, ಮೃತ ಕುಟುಂಬದವರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ (ಜೂನ್ 27) ಬಸವಕಲ್ಯಾಣಕ್ಕೆ ಬರಲಿದ್ದು, ಅವರ ಮೂಲಕ ಪರಿಹಾರದ ಚೆಕ್ ವಿತರಿಸಲಾಗುವುದು ಎಂದು ಹೇಳಿದರು.