ಮೈಸೂರು: ಹುಣಸೂರು ತಾಲ್ಲೂಕಿನ ರೈತರು ಭತ್ತದ ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಆದರೆ, ಭರ್ತಿಯಾದ ಹನಗೋಡು ಅಣೆಕಟ್ಟೆಯಿಂದ ಕಾಲುವೆಗೆ ನೀರು ಹರಿದಿಲ್ಲ.
ಕಾವೇರಿ ನೀರಾವರಿ ನಿಗಮ ₹150 ಕೋಟಿ ವೆಚ್ಚದಲ್ಲಿ ಉದ್ದೂರು ಹಾಗೂ ಹನುಮಂತಪುರ ಕಾಲುವೆ ಆಧುನೀಕರಣ ಕೈಗೆತ್ತಿಕೊಂಡಿದ್ದು, ಮಳೆಗಾಲ ಶುರುವಾದರೂ ಇದುವರೆಗೆ ಶೇ 30ರಿಂದ ಶೇ 40ರಷ್ಟು ಕಾಮಗಾರಿಯೂ ಆಗಿಲ್ಲ.
ಕಾಲುವೆಯಿಂದ 28,000 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಕರ್ಯವಿದ್ದರೆ, ಈ ಕಾಲುವೆಯನ್ನೇ ಬಳಸಿಕೊಂಡು ಹುಣಸೂರು ತಾಲ್ಲೂಕಿನ 20ಕ್ಕೂ ಹೆಚ್ಚು ಕೆರೆಗಳನ್ನು ಲಕ್ಷ್ಮಣ ತೀರ್ಥ ನದಿ ನೀರಿನಿಂದ ತುಂಬಿಸಲಾಗುತ್ತದೆ.
ಹೋಬಳಿ ಕೇಂದ್ರವಾದ ಚಿಲಕುಂದ ಗ್ರಾಮದಲ್ಲಿ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ. ಆದರೆ ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ರಾಜಕೀಯ ಮೇಲಾಟದಲ್ಲಿ ತೊಡಗಿದ್ದು, ಸಮಸ್ಯೆ ಹೇಳಿಕೊಳ್ಳಲು ಸಿಗುತ್ತಿಲ್ಲ ಎನ್ನುವುದು ಜನರ ಅಳಲು.