ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಶಾಸಕರು: ತೀರ್ಪು ವ್ಯತಿರಿಕ್ತವಾದರೆ ಸಂಬಂಧಿಕರಿಗೆ ಟಿಕೆಟ್‌

ಅನರ್ಹ ಶಾಸಕರಿಗೆ ಅವಕಾಶ ನೀಡಲು ಬಿಜೆಪಿ ಒಲವು
Last Updated 26 ಸೆಪ್ಟೆಂಬರ್ 2019, 5:52 IST
ಅಕ್ಷರ ಗಾತ್ರ

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಗೇ ಬಿಜೆಪಿ ಟಿಕೆಟ್‌ ನೀಡಲು ಉದ್ದೇಶಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬಂದರೆ ಮಾತ್ರ ಅನರ್ಹರ ಬದಲಿಗೆ ಅವರು ಹೇಳುವ ವ್ಯಕ್ತಿಗಳಿಗೆ ಟಿಕೆಟ್‌ ನೀಡಲಿದೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಅನರ್ಹರಿಗೆ ಟಿಕೆಟ್‌ ನೀಡುವ ಸಂಬಂಧ ಪಕ್ಷದಲ್ಲಿ ತಕರಾರಿಲ್ಲ. ಇವರನ್ನು ಬಿಟ್ಟು ಪಕ್ಷದಿಂದ ಬೇರೆಯವರನ್ನು ಕಣಕ್ಕಿಳಿಸುವ ಪ್ರಯೋಗಕ್ಕೂ ಪಕ್ಷ ಮುಂದಾಗುವುದಿಲ್ಲ. ಪಕ್ಷ ನಡೆಸಿರುವ ಸಮೀಕ್ಷೆ ಅಂದಾಜಿನ ಪ್ರಕಾರ 10 ರಿಂದ 12 ಕ್ಷೇತ್ರಗಳನ್ನು ಅನಾಯಾಸವಾಗಿ ಗೆಲ್ಲಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇನ್ನು ಒಂದೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರಿಗೆ ಅನುಕೂಲವಾಗುವ ತೀರ್ಪು ಹೊರಬೀಳಬಹುದು. ಇದರಿಂದ ಅವರ ಕೋಪ ಶಮನವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದು.

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರೆ, ಅಂತಹ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಲಹೆಯನ್ನು ಎಸ್‌.ಟಿ.ಸೋಮಶೇಖರ್‌ ಮತ್ತು ಎಂ.ಟಿ.ಬಿ ನಾಗರಾಜ್‌ ನೀಡಿದ್ದರು. ಇದಕ್ಕೆ ಪಕ್ಷ ಒಪ್ಪಿಕೊಳ್ಳಲಿಲ್ಲ. ಎಲ್ಲರೂ ಪಕ್ಷದ ಚಿಹ್ನೆಯಲ್ಲಿ ಸ್ಪರ್ಧಿಸಬೇಕು, ಗೆಲ್ಲಿಸಿ ಕೊಂಡು ಬರುವ ಜವಾಬ್ದಾರಿ ನಮ್ಮದು ಎಂಬುದಾಗಿ ಬಿಜೆಪಿ ಹೇಳಿತ್ತು.

ಇನ್ನು ಒಂದೆರಡು ದಿನಗಳಲ್ಲಿ ಅನರ್ಹ ಶಾಸಕರಿಗೆ ನಿರಾಳವಾಗುವ ತೀರ್ಪು ಸಿಗಬಹುದು. ಹೀಗಾಗಿ ಅವರೇ ಅಭ್ಯರ್ಥಿಗಳಾಗುವುದು ನಿಶ್ಚಿತ. ಎಲ್ಲರೂ ಪ್ರಬಲ ಮತ್ತು ಪ್ರಭಾವಿ ನಾಯಕರೇ ಆಗಿರುವುದರಿಂದ ಗೆಲುವು ಕಷ್ಟವಾಗಲಾರದು. ಸ್ವಂತ ವರ್ಚಸ್ಸಿನ ಜತೆಗೆ ಪಕ್ಷದ ಮತಗಳೂ ಅವರಿಗೆ ಬರುತ್ತವೆ ಎಂಬುದು ಬಿಜೆಪಿ ಲೆಕ್ಕಾಚಾರ.

ಜೆಡಿಎಸ್‌ ತೊರೆದ ಎಚ್‌.ವಿಶ್ವನಾಥ್‌ ಮತ್ತು ನಾರಾಯಣಗೌಡ ಹಾಗೂ ಎಂ.ಟಿ.ಬಿ.ನಾಗರಾಜ್‌ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಲ್ಲಿ ಕಠಿಣ ಸ್ಪರ್ಧೆ ಏರ್ಪಡಬಹುದು. ಉಳಿದಂತೆ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬಹುದು. ಅನರ್ಹರ ಬದಲಿಗೆ ಅವರ ಕುಟುಂಬದ ಸದಸ್ಯರು ಕಣಕ್ಕೆ ಇಳಿದರೆ, ಸ್ವಲ್ಪ ಕಷ್ಟವಾಗಬಹುದು. ಎಚ್‌.ವಿಶ್ವನಾಥ್‌ ಮತ್ತು ಎಂ.ಟಿ.ಬಿ.ನಾಗರಾಜ್‌ ಬಿಟ್ಟರೆ, ಉಳಿದವರೆಲ್ಲರೂ ಸಚಿವರಾಗಬೇಕು ಎಂಬ ಉತ್ಸಾಹದಲ್ಲಿ ಇದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು.

ಅಥಣಿಯಲ್ಲಿ ಮಹೇಶ್‌ ಕುಮಟಳ್ಳಿ ಸ್ಪರ್ಧಿಸಲು ಹಿಂದೇಟು ಹಾಕಿದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಟಿಕೆಟ್‌ ನೀಡಲಾಗುತ್ತದೆ. ಆಗ ಕುಮಟಳ್ಳಿಯನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡ
ಬಹುದು. ಒಂದು ವೇಳೆ ಕುಮಟಳ್ಳಿ ಟಿಕೆಟ್‌ಗೆ ಪಟ್ಟು ಹಿಡಿದರೆ, ಸವದಿಯನ್ನು ಪರಿಷತ್‌ಗೆ ಕಳಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT