ಬೆಂಗಳೂರು: ಭಟ್ಕಳದ ಮಾಜಿ ಶಾಸಕ ಜೆ.ಡಿ.ನಾಯ್ಕ ಅವರು ಬಿಜೆಪಿಗೆ ವಿದಾಯ ಹೇಳಿ ಮಾತೃಪಕ್ಷ ಕಾಂಗ್ರೆಸ್ಗೆ ಮರಳಿದರು.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಾಯ್ಕ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಬರಮಾಡಿಕೊಂಡರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಕಾಂಗ್ರೆಸ್ಗೆ ವಾಪಸಾಗಿದ್ದಾರೆ.
‘ಅನಂತ್ಕುಮಾರ್ ಹೆಗಡೆ ಐದು ಬಾರಿ ಸಂಸದರಾಗಿ ಉತ್ತರ ಕನ್ನಡ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಆದರೆ, ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯ. ಲೋಕಸಭೆಯಲ್ಲೂ ಅವರು ಕ್ರಿಯಾಶೀಲರಾಗಿಲ್ಲ ಎಂದು ದಿನೇಶ್ ಗುಂಡೂರಾವ್ ದೂರಿದರು.
‘ದಲಿತರ, ಹಿಂದುಳಿದವರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಇದಕ್ಕಾಗಿ ನಾಯ್ಕ ಮತ್ತೆ ವಾಪಸಾಗಿದ್ದಾರೆ. ಇದರಿಂದ ಬಲ ಬಂದಿದೆ’ ಎಂದರು.
‘ನಾನು ಜೀವನದಲ್ಲಿ ಮತ್ತೆ ಕಾಂಗ್ರೆಸ್ ತ್ಯಜಿಸಿ ತಪ್ಪು ಮಾಡುವುದಿಲ್ಲ. 2018ರಲ್ಲಿ ಕಾಂಗ್ರೆಸ್ ಬಿಟ್ಟು ಆರು ತಿಂಗಳು ಬಿಜೆಪಿಯಲ್ಲಿದ್ದೆ. ಆದರೆ, ನನಗೆ ಅಲ್ಲಿರಲು ಸಾಧ್ಯವಾಗಲಿಲ್ಲ. ಹೀಗಾಗಿ, ಮತ್ತೆ ಮಾತೃಪಕ್ಷಕ್ಕೆ ಬಂದಿದ್ದೇನೆ’ ಎಂದು ಜೆ.ಡಿ ನಾಯ್ಕ ಸಮರ್ಥನೆ ನೀಡಿದರು.