ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ: ಯಡಿಯೂರಪ್ಪ

ಬೆಂಗಳೂರು: ‘ಕುಮಾರಸ್ವಾಮಿ ಕ್ರಾಂತಿಕಾರಿ ಬಜೆಟ್ ಮಂಡಿಸುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ದೋಸ್ತಿ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು, ‘ಹಾಸನ ಬಿಟ್ಟು ಉಳಿದ ಜಿಲ್ಲೆಗಳನ್ನು ಕುಮಾರಸ್ವಾಮಿ ಸಂಪೂರ್ಣವಾಗಿ ಮರೆತಿದ್ದಾರೆ. ಅವರದ್ದೇ ಕ್ಷೇತ್ರವಾದ ರಾಮನಗರಕ್ಕೆ ಮಾತ್ರ ಮಮತೆ ತೋರಿಸಿದ್ದಾರೆ’ ಎಂದರು.
‘ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದು ಎರಡನೇ ಆಯವ್ಯಯವನ್ನು ಮಂಡಿಸಿದರು. ಹಿಂದಿನ ಬಜೆಜ್ನಲ್ಲಿ ಮೀಸಲಿಟ್ಟ ಅನುದಾನದಲ್ಲಿ ಈವರೆಗೆ ಕೇವಲ ಶೇ 35ರಷ್ಟು ಖರ್ಚು ಮಾಡಿದ್ದಾರೆ’ ಎಂದರು.
‘ಅಧಿಕಾರಕ್ಕೆ ಬಂದ ದಿನದಿಂದ ರೈತರ ಸಾಲ ಮನ್ನಾದ ಹೆಸರನ್ನು ಮಾತ್ರ ಅವರು ಹೇಳುತ್ತಿದ್ದಾರೆ. ರೈತಪರ ಎನ್ನುವ ಅವರು, ಒಂದೇ ಕಂತಿನಲ್ಲಿ ₹ 43 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಹೇಳಿದ ಮಾತನ್ನು ಈಗ ತಿರುಚಿದ್ದಾರೆ. ಇದು ರೈತ ಸಮುದಾಯಕ್ಕೆ ಮಾಡಿದ ಮೋಸ. ಸದನದಲ್ಲಿ ಸೋಮವಾರ ಈ ಕುರಿತು ಪ್ರಸ್ತಾಪಿಸುತ್ತೇನೆ’ ಎಂದು ಕಿಡಿಕಾರಿದರು.
‘ಮಹದಾಯಿ ಬಗ್ಗೆ ಒಂದು ಶಬ್ದ ಕೂಡ ಪ್ರಸ್ತಾಪವಾಗಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುಯದಾಯಕ್ಕೆ ಬಜೆಟ್ನಲ್ಲಿ ನೀಡಿದ ಕೊಡುಗೆ ಏನು. ಜನರಿಗೆ ನಂಬಿಕೆಗೆ ಮುಖ್ಯಮಂತ್ರಿ ದ್ರೋಹ ಮಾಡಿದ್ದಾರೆ’ ಎಂದರು.
ಬರಹ ಇಷ್ಟವಾಯಿತೆ?
0
0
0
0
1
0 comments
View All