ಕಾರವಾರ: ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದಲ್ಲಿ ಶಶಿಭೂಷಣ ನಾಯ್ಕ ಎಂಬುವವರ ಮನೆಯಲ್ಲಿ ಸೋಮವಾರ ತಡರಾತ್ರಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಮನೆ ಕರಕಲಾಗಿದೆ. ಮನೆಯಲ್ಲಿದ್ದ ಆರು ಮಂದಿಯೂ ಅದೃಷ್ಟವಶಾತ್ ಅಪಾಯವಿಲ್ಲದೇ ಪಾರಾಗಿದ್ದಾರೆ.
ಮನೆಯಲ್ಲಿದ್ದ ಪೀಠೋಪಕರಣ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕದಳದ ಸಿಬ್ಬಂದಿ ಒಂದು ತಾಸಿಗೂ ಅಧಿಕ ಕಾರ್ಯಾಚರಣೆ ಮಾಡಿ ಬೆಂಕಿ ಆರಿಸಿದರು.
ಸ್ಟೌಗೆ ಸಂಪರ್ಕ ನೀಡಿದ್ದ ಸಿಲಿಂಡರ್ ಸಮೀಪದಲ್ಲೇ ಮತ್ತೊಂದು ಸಿಲಿಂಡರ್ ಕೂಡ ಇತ್ತು. ಅವುಗಳಲ್ಲಿ ಒಂದು ರಾತ್ರಿ 11ರ ಸುಮಾರಿಗೆ ಇದ್ದಕ್ಕಿದ್ದಂತೆ ಸ್ಫೋಟಗೊಂಡಿತು. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ.
ಮನೆಮಂದಿ ತಕ್ಷಣ ಹೊರಗೋಡಿ ಬಂದ ಕಾರಣ ಯಾರಿಗೂ ಗಾಯಗಳಾಗಲಿಲ್ಲ. ಅಕ್ಕಪಕ್ಕದ ನಿವಾಸಿಗಳು ಕೂಡಲೇ ಬೆಂಕಿ ನಂದಿಸಲು ಶ್ರಮಿಸಿದರೂ ಪ್ರಯೋಜನವಾಗಲಿಲ್ಲ. ನೋಡನೋಡುತ್ತಿದ್ದಂತೆ ಮನೆಗೆ ಬೆಂಕಿ ವ್ಯಾಪಿಸಿಕೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಂಕೋಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.