ಮಡಿಕೇರಿ: ಸೋಮಯಂಡ ತಂಡವು ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಕುಮ್ಮಂಡ ತಂಡವನ್ನು 4–2 ಅಂತರದಲ್ಲಿ ಮಣಿಸಿ, ಮುಂದಿನ ಸುತ್ತಿಗೆ ಪ್ರವೇಶಿಸಿತು.
ಸೋಮಯಂಡ ಪರ ಅಪ್ಪಚ್ಚು- ಹ್ಯಾಟ್ರಿಕ್ ಗೋಲು ಗಳಿಸಿದರೆ, ಸುಜು 1 ಗೋಲು ಬಾರಿಸಿದರು. ಕುಮ್ಮಂಡ ಪರವಾಗಿ ಬೋಸ್ ನಂಜಪ್ಪ, ನಾಗೇಶ್ ನಂಜಪ್ಪ ತಲಾ ಒಂದೊಂದು ಗೋಲು ಗಳಿಸಿದರು.
ಬಾಳೆಯಡ ಮತ್ತು ಚೆರುಮಂದಂಡ ತಂಡಗಳು ನಿಗದಿತ ಸಮಯದಲ್ಲಿ (1–1) ಸಮಬಲದ ಹೋರಾಟ ನಡೆಸಿದವು. ಗೆಲುವು ನಿರ್ಧರಿಸಲು ಟೈಬ್ರೇಕರ್ ಮೊರೆ ಹೋಗಲಾಯಿತು. ಬಾಳೆಯಡ ತಂಡವು (3–1) ಜಯ ಗಳಿಸಿತು.
ಕುಪ್ಪಂಡ (ಕೈಕೇರಿ) ತಂಡವು ಬಲ್ಲಚಂಡ ತಂಡವನ್ನು 1–0 ಅಂತರದಲ್ಲಿ ಮಣಿಸಿತು. ಕುಪ್ಪಂಡ ಸೋಮಯ್ಯ 1 ಗೋಲು ದಾಖಲಿಸಿ, ಗೆಲುವಿಗೆ ಕಾರಣರಾದರು.
ಚೇಂದಂಡ ತಂಡವು ಚೌರೀರ ಹೊದವಾಡ ತಂಡವನ್ನು 3–1 ಅಂತರದಿಂದ ಸೋಲಿಸಿತು. ಚೇಂದಂಡ ತಂಡದ ಪರ ಜಗತ್, ಮೋಕ್ಷಿತ್, ಬೋಪಣ್ಣ ತಲಾ ಒಂದು ಗೋಲು ಗಳಿಸಿದರು. ಚೌರೀರ ಮಂದಣ್ಣ ಒಂದು ಗೋಲು ಗಳಿಸಿದರು.
ನೆಲ್ಲಮಕ್ಕಡ ತಂಡವು ಅರಮಣಮಾಡ ವಿರುದ್ಧ (4–1) ಗೆದ್ದಿತು. ನೆಲ್ಲಮಕ್ಕಡ ಪರ ಪೂವಣ್ಣ, ರಾಹುಲ್, ಕಾರ್ಯಪ್ಪ ಹಾಗೂ ಸೋಮಯ್ಯ ತಲಾ ಒಂದು ಗೋಲು ದಾಖಲಿಸಿದರು. ಅರಮಣಮಾಡ ಪರ ಚರ್ಮಣ ಒಂದು ಗೋಲು ದಾಖಲಿಸಿದರು. ಮತ್ತೊಂದು ಪಂದ್ಯದಲ್ಲಿ ಪಾಡೆಯಂಡ ತಂಡವು ಕುಂಡ್ಯೋಳಂಡ ವಿರುದ್ಧ (1–0) ಗೆದ್ದಿತು.
ಗುರುವಾರಕ್ಕೆ ಟೂರ್ನಿಯ 25ನೇ ದಿನ ಮುಕ್ತಾಯವಾಗಿದೆ. 285 ತಂಡಗಳು ವಿವಿಧ ಸುತ್ತುಗಳಲ್ಲಿ ಸೋತು ನಿರ್ಗಮಿಸಿವೆ. 48 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ. ಒಟ್ಟು 333 ತಂಡಗಳು ಈ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದವು.