ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌: ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಶೀಘ್ರವೇ ಟೆಂಡರ್– ಸಚಿವ ಶಿವಕುಮಾರ್

Last Updated 9 ಡಿಸೆಂಬರ್ 2018, 4:52 IST
ಅಕ್ಷರ ಗಾತ್ರ

ಬೆಂಗಳೂರು:ವಿಶ್ವವಿಖ್ಯಾತ ಕೆಆರ್‌ಎಸ್‌ಉದ್ಯಾನವನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಾಗತಿಕ ಟೆಂಡರ್ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಸಲಾಗುವುದು. ರಾಜ್ಯ ಸರಕಾರ ಒಂದು ಪೈಸೆ ಬಂಡವಾಳ ಹೂಡುವುದಿಲ್ಲ. ಟೆಂಡರ್ ನಲ್ಲಿ ಭಾಗವಹಿಸುವ ಸಂಸ್ಥೆ ಉತ್ತಮ ಆರ್ಥಿಕ ಹಿನ್ನೆಲೆ, ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಹೊಂದಿರಬೇಕು ಎಂದು ಕೆಆರ್‌ಎಸ್‌ಯೋಜನೆ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರಿಗೆ ಶನಿವಾರ ತಿಳಿಸಿದರು. ಸದ್ಯದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಯೋಜನೆ ಸ್ವರೂಪ ವರದಿ ಅಂತಿಮಗೊಳಿಸಲಾಗುವುದು. ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ಕುಮಾರಸ್ವಾಮಿ ನೇತೃತ್ವದ ಸರಕಾರ ಎರಡು ಮಹತ್ವದ ಯೋಜನೆಗಳಿಗೆ ಬಜೆಟ್ ಅನುಮೋದನೆ ನೀಡಿದೆ. ಒಂದು ಮೇಕೆದಾಟು. ಮತ್ತೊಂದು ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿ. ಯೋಜನೆಯ ರೂಪುರೇಷೆಗಳು ಅಂತಿಮವಾಗುತ್ತಿವೆ. ಐತಿಹಾಸಿಕ ಮಹತ್ವವನ್ನು ಹೊಂದಿರುವ ಬೃಂದಾವನವನ್ನು ಪ್ರಸಕ್ತ ಯುಗದ ನಿರೀಕ್ಷೆಗೆ ತಕ್ಕಂತೆ ಉನ್ನತೀಕರಣ ಮಾಡಲಾಗುವುದು. ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನದ ಮಂತ್ರಿಗಳು, ಮಂಡ್ಯ ಸಂಸದರು, ಶಾಸಕರು, ಜನ ಪ್ರತಿನಿಧಿಗಳು,ವೇಣುಗೋಪಾಲಸ್ವಾಮಿ ದೇಗುಲ ಪುನರ್ನಿರ್ಮಿಸಿದ ಹರಿಖೋಡೆ ಕುಟುಂಬ, ಮೈಸೂರು ಅರಸರ ಕುಟುಂಬ, ಎಂಜಿನಿಯರುಗಳ ಸಂಘ ಹಾಗೂ ವಿಶ್ವವಿದ್ಯಾಲಯದ ಪ್ರತಿನಿಧಿ ಒಳಗೊಂಡ ಸಮಿತಿ ರಚಿಸಲಾಗುವುದು. ಸುಮಾರು 1500 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಈಗಾಗಲೇ ಸರಕಾರದ ಬಳಿ 336 ಎಕರೆ ಭೂಮಿ ಇದೆ. ಹೀಗಾಗಿ ಯಾರೂ ಆತಂಕಪಡಬೇಕಿಲ್ಲ ಎಂದರು.

ಈಗಿರುವ 74 ಎಕರೆಯ ಬೃಂದಾವನವನ್ನು ಈ ಶತಮಾನಕ್ಕೆ ತಕ್ಕಂತೆ ಅಭಿವೃದ್ದಿ ಮಾಡಲಾಗುವುದು. 2003 ರಲ್ಲಿ ಅಭಿವೃದ್ಧಿಗೊಂಡ ಸಂಗೀತ ಕಾರಂಜಿಯನ್ನು ಕ್ಯಾಲಿಫೋರ್ನಿಯ, ಸಿಂಗಾಪುರದ ಸಂಗೀತ ಕಾರಂಜಿಯಂತೆ ಇಡೀ ಭಾರತಕ್ಕೆ ಗೌರವ ತರುವ ರೀತಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು. ಯೋಜನೆಗೆ ಗುರುತಿಸಿರುವ ಸರಕಾರಿ ಸ್ವತ್ತು ಒತ್ತುವರಿ ಆಗದಂತೆ ಕಲ್ಲಿನ ಕಾಂಪೌಂಡ್ ನಿರ್ಮಿಸಲಾಗುವುದು ಎಂದು ವಿವರಿಸಿದರು.

ಪುಟಾಣಿ ಮಕ್ಕಳಿಂದ ಹಿಡಿದು ಯುವಪೀಳಿಗೆ, ವೃದ್ಧರವರೆಗೆ ಸಂಭ್ರಮಿಸುವಂತೆ ನಾನಾ ಮನರಂಜನೆ ತಾಣಗಳನ್ನು ನಿರ್ಮಿಸಲಾಗುವುದು. ಅಭಿವೃದ್ಧಿಪಡಿಸಲಾಗುವುದು. ಮಧ್ಯದಲ್ಲಿ ಬರುವ ಬೃಹತ್ ರಸ್ತೆಯ ಇಕ್ಕೆಲಗಳಲ್ಲಿ ಹಂಪಿ, ಸೋಮನಾಥಪುರ, ಬೇಲೂರು-ಹಳೇಬೀಡು, ತಾಜ್ ಮಹಲ್ ಸೇರಿದಂತೆ ಕರ್ನಾಟಕ, ಭಾರತದ ಭವ್ಯ ಇತಿಹಾಸ ಸಾರುವ ಸ್ಮಾರಕಗಳ ಶಾಶ್ವತ ಪ್ರತಿರೂಪಗಳನ್ನು ನಿರ್ಮಿಸಲಾಗುವುದು. 125 ಅಡಿ ಎತ್ತರದ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾಂಡ್, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.

ಪ್ರತಿಮೆ ಕಾವೇರಿ ಮಾತೆಯದೋ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದೋ, ಮತ್ಯಾವುದೋ ಎಂಬುದನ್ನು ಸಮಿತಿ ಚರ್ಚಿಸಿ, ನಿರ್ಣಯಿಸಲಿದೆ. ಸರಕಾರ ಪ್ರತಿಮೆ ಹಣ ಭರಿಸುತ್ತಿಲ್ಲ. ಗುತ್ತಿಗೆ ಒಡೆದ ಸಂಸ್ಥೆ ಭರಿಸಲಿದೆ. ಅಣೆಕಟ್ಟೆಗೆ ಯಾವುದೇ ಧಕ್ಕೆ ಆಗುವ ಕೆಲಸ ಮಾಡುವುದಿಲ್ಲ. ಪ್ರತಿ ಹಂತದಲ್ಲೂ ತಾಂತ್ರಿಕ ತಜ್ಙರ ಸಲಹೆ, ಮಾರ್ಗದರ್ಶನ ಪಡೆಯಲಾಗುವುದು ಎಂದರು.

ಯೋಜನೆಗೆ ಪೂರಕವಾಗಿ ವಿಮಾನಯಾನ, ರೈಲ್ವೆ, ರಸ್ತೆ ಮಾರ್ಗಗಳ ಉನ್ನತೀಕರಣ, ಹೆಲಿಟೂರಿಸಂ, ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಹೋಗಿ ಬರಲು ದೋಣಿಗಳ ವ್ಯವಸ್ಥೆ, ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡುಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಉತ್ತರ ಪ್ರದೇಶ, ರಾಜಸ್ಥಾನೆ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ನಾನಾ ಯೋಜನೆಗಳನ್ನು ರೂಪಿಸಿರುವ ಜೈಪುರದ ಸಿನ್ಸಿಯರ್ ಆರ್ಕಿಟೆಕ್ಟ್ ಕನ್ಸಲ್ಟೆಂಟ್ ಸಂಸ್ಥೆ ಈ ಯೋಜನೆಯ ನೀಲನಕ್ಷೆ ಸಿದ್ಧಪಡಿಸಿದೆ. ಈಗಿನ ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬೃಂದಾವನವನ್ನು ವಿಶ್ವಪ್ರವಾಸಿ ತಾಣಗಳಲ್ಲೇ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಉದ್ದೇಶ ಎಂದರು.

ಯೋಜನೆಯ ಒಟ್ಟು ವೆಚ್ಚ 1500 ಕೋಟಿ ರೂಪಾಯಿಗಳು. ಈಗಿರುವ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿಮಾರ್ಣ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT