ಮಡಿಕೇರಿ: ಕೊಡಗಿನ ಗಡಿಭಾಗದಲ್ಲಿ ನಕ್ಸಲ್ ಚಟುವಟಿಕೆ ನಡೆಸಿದ್ದ ಆರೋಪದ ಮೇಲೆ ಬಂಧಿತನಾಗಿರುವ ನಕ್ಸಲ್ ನಾಯಕ ರೂಪೇಶ್ನನ್ನು ಮಂಗಳವಾರ ಬಿಗಿ ಭದ್ರತೆಯಲ್ಲಿ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕೇರಳ ಹಾಗೂ ಕೊಡಗು ನಕ್ಸಲ್ ನಿಗ್ರಹ ಪಡೆಯ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ನ್ಯಾಯಾಲಯದ ಆವರಣಕ್ಕೆ ರೂಪೇಶ್ ಬರುತ್ತಿದ್ದಂತೆಯೇ ನಕ್ಸಲ್ ಹೋರಾಟ ಹಾಗೂ ಕೇರಳದ ವಯನಾಡು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಮೃತಪಟ್ಟ ಶಂಕಿತ ನಕ್ಸಲ್ ಜಲೀಲ್ ಪರವಾಗಿ ಘೋಷಣೆ ಕೂಗಿದ.
ನ್ಯಾಯಾಧೀಶ ವೀರಭದ್ರಪ್ಪ ವಿ.ಮಲ್ಲಾಪುರೆ ಅವರು ವಿಚಾರಣೆಯನ್ನು ಏ. 10ಕ್ಕೆ ಮುಂದೂಡಿದರು. ಬಳಿಕ ಕೇರಳದ ಕಣ್ಣೂರಿನ ಜೈಲಿಗೆ ಭದ್ರತೆಯಲ್ಲಿ ಕರೆದೊಯ್ಯಲಾಯಿತು.
2010ರಲ್ಲಿ ಜಿಲ್ಲೆಯ ಕಾಲೂರು, ಪರಕಟಗೇರಿ ಹಾಗೂ ಭಾಗಮಂಡಲ ಸಮೀಪದ ಚೇರಂಬಾಣೆಯಲ್ಲಿ ರೂಪೇಶ್ ನೇತೃತ್ವದ ಶಂಕಿತ ನಕ್ಸಲ್ ತಂಡವು ಪ್ರತ್ಯಕ್ಷವಾಗಿ ಕರಪತ್ರ ಹಂಚಿಕೆ ಮಾಡಿತ್ತು ಎಂಬ ಆರೋಪವಿದೆ. ಈ ಸಂಬಂಧ ಇಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.