ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಮಹಾವೈಭವ ವೇದಿಕೆಯ ಚಪ್ಪರ ಕುಸಿತ; ಐದು ಮಂದಿಗೆ ಗಾಯ

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕ
Last Updated 14 ಫೆಬ್ರುವರಿ 2019, 20:15 IST
ಅಕ್ಷರ ಗಾತ್ರ

ಉಜಿರೆ: ಧರ್ಮಸ್ಥಳದಲ್ಲಿ ಗುರುವಾರ ಮಧ್ಯಾಹ್ನ ಪಂಚಮಹಾವೈಭವ ಮಂಟಪದ ಬದಿಯ ಚಪ್ಪರ ಗಾಳಿಗೆ ಕುಸಿದು ಬಿದ್ದ ಕಾರಣ ಐವರಿಗೆ ಸಣ್ಣಪುಟ್ಟ ಗಾಯಗಳಾದವು.

ಪಂಚಮಹಾವೈಭವದ ಭಾಗವಾಗಿ ಭರತ ಚಕ್ರಿಗೆ ಶರಣಾಗುವಂತೆ ಮಂತ್ರಿಯ ಮೂಲಕ ಬಾಹುಬಲಿಗೆ ಸಂದೇಶ ಕಳುಹಿಸುವ ನೃತ್ಯ ರೂಪಕ ಬೆಳಿಗ್ಗೆ ಇದೇ ವೇದಿಕೆಯಲ್ಲಿ ನಡೆದಿತ್ತು. ಊಟದ ಸಮಯ ಆಗಿದ್ದರಿಂದ ಹೆಚ್ಚಿನವರು ಊಟಕ್ಕೆ ಹೋಗಿದ್ದರು. ಆ ವೇಳೆ ವೇದಿಕೆಯ ಒಂದು ಭಾಗದ ಚಪ್ಪರ ನಿಧಾನವಾಗಿ ಕುಸಿದು ಬಿತ್ತು. ಆಗ ಸುಮಾರು 30 ಮಂದಿ ಒಳಗಿದ್ದರು. ತಕ್ಷಣ ಅವರೆಲ್ಲರೂ ಹೊರಗೆ ಬಂದಿದ್ದರು.

‘ಗಾಯಗೊಂಡವರು ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ. ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಎಲ್ಲಾ ಕಾರ್ಯಕ್ರಮಗಳು ನಿಗದಿಯಂತೆ ನಡೆಯುತ್ತವೆ. ಯಾವುದೇ ಗೊಂದಲವಿಲ್ಲ. ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು’ ಎಂದು ಧರ್ಮಸ್ಥಳ ಬಾಹುಬಲಿ ಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಸಂಚಾಲಕ ಕೆ. ಮಹಾವೀರ ಅರ್ಜಿ ಮನವಿ ಮಾಡಿದ್ದಾರೆ.

ಶನಿವಾರ ಮಹಾಮಸ್ತಕಾಭಿಷೇಕ

ಧರ್ಮಸ್ಥಳದ ರತ್ನಗಿರಿಯಲ್ಲಿರುವ 39 ಅಡಿ ಎತ್ತರದ ಭಗವಾನ್ ಬಾಹುಬಲಿ ಮೂರ್ತಿಗೆ ಶನಿವಾರ ಬೆಳಿಗ್ಗೆ 8.45ಕ್ಕೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.

ಬೆಳಿಗ್ಗೆ ಗಂಟೆ 6.30ಕ್ಕೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯಿಂದ ಭವ್ಯ ಅಗ್ರೋದಕ ಮೆರವಣಿಗೆ ರತ್ನಗಿರಿಗೆ ಹೋಗಿ, ಬಳಿಕ ಬೆಳಿಗ್ಗೆ 8.45 ರ ಮೀನ ಲಗ್ನದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಪ್ರತಿಷ್ಠಾಪಕರಾದ ಡಿ. ವೀರೇಂದ್ರ ಹೆಗ್ಗಡೆ ಅವರು ಮತ್ತು ಕುಟುಂಬಸ್ಥರಿಂದ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಲಿದೆ.

ಗುರುವಾರ 216 ಕಲಶಗಳಿಂದ ಬಾಹುಬಲಿಗೆ ಪಾದಾಭಿಷೇಕ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT