ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಪಲ್ಲಕ್ಕಿ ಉತ್ಸವ ಮಂಗಳವಾರ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಿಂದ ಜರುಗಿತು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ರಥೋತ್ಸವದ ಬದಲು ಕಬ್ಬಿಣದ ಸರಪಳಿ ಹರಿಯಲಾಯಿತು. ಸರಪಳಿ ಹರಿಯುವ ದೃಶ್ಯ ನೋಡಲು ಅಪಾರ ಭಕ್ತ ಸಮೂಹ ನೆರೆದಿತ್ತು.
ಲಕ್ಷಾಂತರ ಭಕ್ತರು ಏಳು ಕೋಟಿ ಏಳು ಕೋಟ್ಯೋ... ಎಂಬ ಜಯ ಘೋಷದೊಂದಿಗೆ ಮಲ್ಲಯ್ಯನಿಗೆ ಪ್ರಿಯವಾದ ಭಂಡಾರ, ಕುರಿ ಉಣ್ಣೆ, ಒಂದು, ಎರಡು ರೂಪಾಯಿ ನಾಣ್ಯ ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಜೋಳ, ಶೇಂಗಾ, ಛತ್ರಿ ಎಸೆದು ಭಕ್ತಿಭಾವ ಮೆರೆದರು.
ಕುರಿಮರಿ ತೂರಿದರು: ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಮೂರು ಕುರಿಮರಿಗಳನ್ನು ಭಕ್ತರು ಪಲ್ಲಕ್ಕಿ ಮೇಲೆ ಹಾರಿಸಿದ್ದಾರೆ. ಪಲ್ಲಕ್ಕಿ ಮೇಲೆ ಕುರಿ ಹಾರಿಸುವುದು ನಿಷೇಧ. ಹಾರಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಧ್ವನಿವರ್ಧಕದಲ್ಲಿ ಪೊಲೀಸರು ಹೇಳು ತ್ತಿದ್ದರು.ಆದರೂ, ಭಕ್ತರು ಅದನ್ನು ಲೆಕ್ಕಿಸಲಿಲ್ಲ.