ನವದೆಹಲಿ: ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿವರ ಯೋಜನಾ ವರದಿ (ಡಿ.ಪಿ.ಆರ್.) ತಯಾರಿಸಲು ಕೇಂದ್ರ ಸರ್ಕಾರ ನೀಡಿರುವ ತಾತ್ವಿಕ ಅನುಮೋದನೆ ಬೇಷರತ್ತಿನದಲ್ಲ. ಕಾವೇರಿ ನದಿ ನೀರಿಗೆ ಸಂಬಂಧಿಸಿದ ಅಂತರರಾಜ್ಯ ವಿವಾದಗಳನ್ನು ಕರ್ನಾಟಕ ಸೌಹಾರ್ದಯುತವಾಗಿ ಬಗೆಹರಿಸಿಕೊಂಡರೆ ಮಾತ್ರ ಈ ಯೋಜನೆಯ ಜಾರಿ ಸಾಧ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಈ ಷರತ್ತುಬದ್ಧ ಅನುಮೋದನೆಯು ಕೇವಲ ಡಿ.ಪಿ.ಆರ್. ತಯಾರಿಕೆಗೆ ಸೀಮಿತವೇ ವಿನಾ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅಥವಾ ಕೇಂದ್ರೀಯ ಜಲ ಆಯೋಗ ನೀಡಿರುವ ಸಮ್ಮತಿ ಅಲ್ಲ ಎಂದು ಪ್ರಮಾಣಪತ್ರವೊಂದರಲ್ಲಿ ಸ್ಪಷ್ಟಪಡಿಸಲಾಗಿದೆ.
ತನ್ನೊಂದಿಗೆ ಸಮಾಲೋಚಿಸಿಲ್ಲ ಎಂಬ ತಮಿಳುನಾಡಿನ ವಾದದಲ್ಲಿ ಸತ್ಯಾಂಶವಿಲ್ಲ. ಯೋಜನೆಯ ಸಾಧ್ಯಾಸಾಧ್ಯತೆಯ ವರದಿಯನ್ನು ಕಳೆದ ಆಗಸ್ಟ್ 24ರಂದೇ ತಮಿಳುನಾಡಿನೊಂದಿಗೆ ಹಂಚಿಕೊಳ್ಳಲಾಗಿದೆ ಎಂದೂ ಕೇಂದ್ರ ಸರ್ಕಾರ ಹೇಳಿದೆ.
ಕುಡಿಯುವ ನೀರು ಪೂರೈಕೆಗಾಗಿ ಕಾವೇರಿ ನದಿಗೆ ಅಡ್ಡವಾಗಿ ನಿರ್ಮಿಸುವ ಮೇಕೆದಾಟು ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 67.16 ಟಿ.ಎಂ.ಸಿ.ಅಡಿಗಳು. ಉದ್ದೇಶಿತ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯ 400 ಮೆಗಾವಾಟ್. ಅಂದಾಜು ವೆಚ್ಚ ₹5,912 ಕೋಟಿ.