ಹುಕ್ಕೇರಿ: ‘ನನ್ನ ಯೋಗ್ಯತೆಗೆ ಯಡಿಯೂರಪ್ಪ ಅವರಿರುವ ಮುಖ್ಯಮಂತ್ರಿ ಸ್ಥಾನ ಸಿಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ದೇವರ ಆಶೀರ್ವಾದ ಇದ್ದರೆ ಮುಂದೆ ನೋಡೋಣ’ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರವಿಲ್ಲ. ಇದುವರೆಗೆ ನನ್ನ ಹೆಂಡ್ತಿ ಮೇಲೆಯೇ ಮುನಿಸಿಕೊಂಡಿಲ್ಲ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಏಕೆ ಮುನಿಸಿಕೊಳ್ಳಲಿ‘ ಎಂದರು.
‘ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದ ನನ್ನನ್ನು ಕೈಬಿಟ್ಟಿರಬಹುದು. ನನ್ನ ನಸೀಬಿನಲ್ಲಿ (ಹಣೆಬರಹ) ಸಚಿವ ಸ್ಥಾನ ಇಲ್ಲ. ಹೀಗಾಗಿ ಸಿಕ್ಕಿಲ್ಲ. 13 ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಂದೆ ಸಚಿವ ಸ್ಥಾನ ಸಿಗಬಹುದು. ಸಿಕ್ಕಾಗ ನೋಡೋಣ’ ಎಂದು ನುಡಿದರು.
ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶ್ರೀಮಂತ ಪಾಟೀಲ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರಿಗೆ ನನಗಿಂತ ಹೆಚ್ಚು ಅನುಭವ ಇದೆ. ಅದಕ್ಕೆ ಅವರಿಗೆ ನೀಡಿರಬಹುದು’ ಎಂದು ಹೇಳಿದರು.