ಬೆಳಗಾವಿ: ‘ಗೋಕಾಕ ಕ್ಷೇತ್ರದ ರಾಜಕಾರಣವೇ ಬೇರೆ. ಇದು ಪರೀಕ್ಷೆ ಇದ್ದಂತೆ. 25 ವರ್ಷಗಳಿಂದ ರಮೇಶ ಜೊತೆ ಸೇರಿ ನಾನು ಇಲ್ಲಿ ರಾಜಕಾರಣ ಮಾಡುತ್ತಿದ್ದೆ. ನಮ್ಮ ತಂತ್ರಗಳು ಅವರಿಗೆ ಗೊತ್ತಿವೆ. ಹೀಗಾಗಿ, ಎಲ್ಲವನ್ನೂ ಬಹಿರಂಗ ಹಾಗೂ ರಾಜಾರೋಷವಾಗಿ ಹೇಳಿಕೊಳ್ಳುವುದಿಲ್ಲ’ ಎಂದು ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ತಿಳಿಸಿದರು.
ಗೋಕಾಕದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲ್ಲಿನದು ತಂತ್ರಗಾರಿಕೆರಾಜಕಾರಣ. ಬೇರೆಯವರು ಬಂದು ಇಲ್ಲಿ ರಾಜಕಾರಣ ಮಾಡಲಾಗದು. ಹೊಂದಾಣಿಕೆ ರಾಜಕಾರಣ ಇಲ್ಲಿಲ್ಲ. ಹೇಗೆ ನಡೆಸಬೇಕು ಎನ್ನುವುದು ನನಗೂ, ಸತೀಶ ಜಾರಕಿಹೊಳಿಗೂ ಗೊತ್ತಿದೆ’ ಎಂದರು.
‘ನಮ್ಮಿಂದ ಪ್ರಚೋದನಾಕಾರಿ ಹೇಳಿಕೆ ಕೊಡಿಸಿ ವಿರೋಧಪಕ್ಷದವರು ಅದನ್ನೇ ಬಳಸಿಕೊಳ್ಳುತ್ತಾರೆ. ಹೀಗಾಗಿ, ನಮ್ಮ ಗೇಮ್ಪ್ಲಾನ್ ಏನು ಎನ್ನುವುದನ್ನು ಹೇಳುವುದಿಲ್ಲ; ಕಣದಲ್ಲೇ ನೋಡಿ’ ಎಂದು ಹೇಳಿದರು.