ಹುಬ್ಬಳ್ಳಿ: ಲಾಕ್ಡೌನ್ ಆದೇಶ ಉಲ್ಲಂಘಿಸಿ ಮಸೀದಿಯಲ್ಲಿ ಪ್ರಾರ್ಥನೆಗೆ ಮುಂದಾದವರನ್ನು ಚದುರಿಸಲು ಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ 10 ಜನರನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ ಒಟ್ಟು 15 ಆಗಿದೆ.
‘ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿ ಇನ್ನಷ್ಟು ಜನರ ಹುಡುಕಾಟ ಮುಂದುವರಿದಿದ್ದು, ಅಲ್ಲಿಯ ವರೆಗೆ ಪೊಲೀಸರು ಕಾಲೊನಿಯಲ್ಲಿಯೇ ಮೊಕ್ಕಾಂ ಹೂಡಲಿದ್ದಾರೆ’ ಎಂದು ಎಸಿಪಿ ಎಂ. ಮಲ್ಲಾಪುರಿ ತಿಳಿಸಿದ್ದಾರೆ.
ಆರು ಜನರ ಬಂಧನ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದಾಗ, ಶಿರಸಿಯ ಕನವಳ್ಳಿ ಗಲ್ಲಿಯ ಖೂಬಾ ಮಸೀದಿ ಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲು ಯತ್ನಿಸಿದ ಆರೋಪದಮೇಲೆ ಮಾರುಕಟ್ಟೆ ಠಾಣೆಯ ಪೊಲೀಸರು ಮೂವರನ್ನು ಬಂಧಿಸಿ ದ್ದಾರೆ. ಮುಂಡಗೋಡ ತಾಲ್ಲೂಕಿನ ಹುನಗುಂದ ಹಾಗೂ ವೀರಾಪುರ ಗ್ರಾಮದಲ್ಲೂ ಮೂವರನ್ನು ಬಂಧಿಸಲಾಗಿದೆ.
ಐವರ ಬಂಧನ ಕಾರಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಸೋಮನಾಳ ಗ್ರಾಮದಲ್ಲಿಲಾಕ್ಡೌನ್ ಆದೇಶ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಐವರ ಪೈಕಿ ಶುಕ್ರವಾರ ಇಬ್ಬರನ್ನು ಹಾಗೂ ಶನಿವಾರ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಹೊರವಲಯದ ಶೆಡ್ವೊಂದರಲ್ಲಿ ಶುಕ್ರವಾರ ಐವರು ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಸ್ಥಳೀಯರು ಇವರನ್ನು ಕೂಡಿಹಾಕಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.ಗಂಗಾವತಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಸುರೇಶ ತಳವಾರ ಸ್ಥಳಕ್ಕೆ ಬರುತ್ತಿದ್ದಂತೆ ಐವರಲ್ಲಿ ಮೂವರು ಪರಾರಿಯಾಗಿದ್ದರು.
ವಜೀರಸಾಬ್, ರಾಜಾಸಾಬ್, ಯೂನುಸ್, ಹಸನಸಾಬ್ ಹಾಗೂ ದಾದಾಪೀರಬಂಧಿತರು ಎಂದು ಕಾರಟಗಿ ಪೊಲೀಸರು ತಿಳಿಸಿದ್ದಾರೆ.