ಬೆಂಗಳೂರು:ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ನೌಕರರ ವೇತನ ಶ್ರೇಣಿ ಪರಿಷ್ಕರಣೆಯನ್ನು ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ವರದಿಯಂತೆ ರಾಜ್ಯ ಸರ್ಕಾರ ಜಾರಿ ಮಾಡಿದ್ದು, ಇದರಜತೆಗೆ, ಕಷ್ಟ ಪರಿಹಾರ ಭತ್ಯೆಯನ್ನೂ ಹೆಚ್ಚಿಸಿದೆ.
2019ರ ಆಗಸ್ಟ್ 1ರಿಂದ ಅನ್ವಯವಾಗುವಂತೆ ತಕ್ಷಣದಿಂದ ಜಾರಿಗೆ ಬರುವಂತೆ ಶನಿವಾರ ಆದೇಶಿಸಿದೆ. ದೀಪಾವಳಿ ಉಡುಗೊರೆ ಮತ್ತು ಪೊಲೀಸ್ ಹುತಾತ್ಮದಿನದ ಮುನ್ನಾ ದಿನ ಈ ಆದೇಶ ಹೊರ ಬಿದ್ದಿದೆ.
ಪೊಲೀಸ್ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗೆ ಈಗಿರುವ ಕಷ್ಟ ಪರಿಹಾರ ಭತ್ಯೆಯ ಜತೆಗೆ ಹೆಚ್ಚುವರಿಯಾಗಿ ₹ 1,000 ಮಂಜೂರು ಮಾಡಿದೆ.
ಈ ವರದಿ ಜಾರಿಯಿಂದಾಗಿ ಹೊಸದಾಗಿ ಸೇರುವ ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಇರುವ ಮಾಸಿಕ ವೇತನದ ಒಟ್ಟು ₹ 30,427(ಎಲ್ಲಾ ಭತ್ಯೆಗಳು ಸೇರಿ) ಬದಲಿಗೆ ₹ 34,267(ಎಲ್ಲಾ ಭತ್ಯೆಗಳು ಸೇರಿ) ಕ್ಕೆ ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.