ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಶ್ರಯ’: ದೊರಕದ ಕುಡಿಯುವ ನೀರು

ಶಹಾಪುರ: ನಗರದ ಬಸ್ ನಿಲ್ದಾಣದ ಹಿಂದುಗಡೆಯ ವಾರ್ಡ್ ನಂಬರ 17 ವ್ಯಾಪ್ತಿ
Last Updated 7 ಮೇ 2018, 14:16 IST
ಅಕ್ಷರ ಗಾತ್ರ

ಶಹಾಪುರ: ನಗರದ ಬಸ್ ನಿಲ್ದಾಣದ ಹಿಂದುಗಡೆಯ ವಾರ್ಡ್ ನಂಬರ 17 ವ್ಯಾಪ್ತಿಯಲ್ಲಿ ಬರುವ ಆಶ್ರಯ ಕಾಲೊನಿಯಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಬೇಸಿಗೆಯ ಕಾಲವಾಗಿದ್ದರಿಂದ ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.

ಅಂದಿನ ಪುರಸಭೆಯು ಎಂಟು ವರ್ಷದ ಹಿಂದೆ ಪ್ರತ್ಯೇಕವಾಗಿ ಬುಡ್ಗ ಜಂಗಮ, ಶಿಳ್ಯಾಕ್ಯಾತರು, ಬೈಲ್ ಪತ್ತಾರ, ಕುಂಚುಕೊರುವರು, ಮೀನುಗಾರರು, ಚೆನ್ನದಾಸರು ಬಡ ಕುಟುಂಬಗಳಿಗೆ ಸರ್ಕಾರದಿಂದ ಆಶ್ರಯ ಯೋಜನೆ ಅಡಿಯಲ್ಲಿ ಸುಮಾರು 300 ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಬಯಲು ಜಾಗದಲ್ಲಿ ಗುಡಿಸಲು, ತಾತ್ಕಾಲಿಕ ಶೆಡ್ ಹಾಕಿಕೊಂಡು ಕುಟುಂಬಗಳು ನೆಲೆಕಂಡಿವೆ.

ಆದರೆ ಕಾಲೊನಿಯಲ್ಲಿ ಇಂದಿಗೂ ಸಮರ್ಪಕವಾಗಿ ಚರಂಡಿ ವ್ಯವಸ್ಥೆ, ಒಳ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲವಾಗಿದೆ. ಹಲವಾರು ಸೌಲಭ್ಯಗಳಿಲ್ಲದೆ ಜೀವನ ನಿರ್ವಹಣೆಯನ್ನು ಮಾಡುತ್ತಿದ್ದಾರೆ. ನಗರಸಭೆಗೆ ಸಾಕಷ್ಟು ಬಾರಿ ಮುತ್ತಿಗೆ, ಪ್ರತಿಭಟನೆ, ಧರಣಿ ನಡೆಸಿ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದರು ಸಹ ನಗರಸಭೆ ಜನತೆಯ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಲ್ಲಯ್ಯ ಪೊಲಂಪಲ್ಲಿ.

ಆಶ್ರಯ ಕಾಲೊನಿಯ ಮೀನುಗಾರರು ವಾಸಿಸುವ ಮನೆಯ ಹತ್ತಿರ ಕಿರು ನೀರು ಸರಬರಾಜು ಮಾಡುವ ಗುಮ್ಮಿಯನ್ನು (ನೀರು ಸಂಗ್ರಹಿಸುವ ಉದ್ದನೆಯ ತೊಟ್ಟಿ) ನಿರ್ಮಿಸಿ ಅದರ ಮೂಲಕ ನೀರು ಪಡೆದುಕೊಳ್ಳುತ್ತಾರೆ. ಆದರೆ ಉಳಿದ ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಬಡಾವಣೆಯ ನಿವಾಸಿಗರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿದರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ಬಡಾವಣೆಯ ನಿವಾಸಿ ವೆಂಕಟೇಶ ಕಟ್ಟಿಮನಿ.

ಬೇಸಿಗೆ ಕಾಲವಾಗಿದ್ದರಿಂದ ಈಗ ಮತ್ತಷ್ಟು ಸಮಸ್ಯೆ ಉಂಟಾಗಿದೆ. ದೂರದ ಬೊರವೆಲ್‌ಗೆ ತೆರಳಿ ನೀರು ತರುವ ದುಸ್ಥಿತಿ ಬಂದಿದೆ. ಅಲ್ಲದೆ ನಗರಕ್ಕೆ ನೀರು ಪೂರೈಕೆ ಮಾಡುವ ಫಿಲ್ಟರ್ ಬೆಡ್ ಕೆರೆಯಿಂದ ನೇರವಾಗಿ ನಮ್ಮ ಬಡಾವಣೆಗೆ ನೀರು ಪೂರೈಯಿಸುವ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಕುಡಿಯುವ ನೀರಿಗಾಗಿ ಇಷ್ಟೊಂದು ಸಮಸ್ಯೆಯನ್ನು ಎದುರಿಸುತ್ತಿರುವಾಗ ಇನ್ನೂ ಶೌಚಾಲಯಕ್ಕೆ ನೀರನ್ನು ಎಲ್ಲಿಂದ ತರಬೇಕು. ಬಯಲು ಶೌಚಾಲಯ ಉಪಯೋಗಿಸುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಬಡಾವಣೆಯ ಮಹಿಳೆಯೊಬ್ಬರು.

ನಗರಸಭೆಯು ತಕ್ಷಣ ಸಮಸ್ಯೆಗೆ ಸ್ಪಂದಿಸಿ ಸಮರ್ಪಕವಾಗಿ ಸ್ಪಂದಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಲ್ಲಿನ ನಿವಾಸಿಗರು ಮನವಿ ಮಾಡಿದ್ದಾರೆ.

**
ಆಶ್ರಯ ಕಾಲೊನಿಯಲ್ಲಿ ನಿರ್ಗತಿಕ ಕುಟುಂಬಗಳು ವಾಸವಾಗಿವೆ. ಬೇಸಿಗೆ ಕಾಲವಾಗಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನಗರಸಭೆ ಅಧಿಕಾರಿಗಳು ಜನತೆಯ ಗೋಳಿಗೆ ಸ್ಪಂದಿಸಲಿ
– ಮಲ್ಲಯ್ಯ ಪೊಲಂಪಲ್ಲಿ, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT