ಬೆಂಗಳೂರು: ಕರಾವಳಿ ಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ. ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಲ್ಲಿ ಮರ ಬಿದ್ದು ಮನೆ, ದೇವಸ್ಥಾನಕ್ಕೆ ಹಾನಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಬಿಕ್ಕರಣೆಯಲ್ಲಿ ಮರ ಬಿದ್ದು ಕೊಟ್ಟಿಗೆಗೆ ಹಾನಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಸುತ್ತಮುತ್ತ ಗುರುವಾರ ಸಾಧಾರಣ ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳ್ತಂಗಡಿ, ಕೊಯ್ಯೂರು, ಗುರುವಾಯನಕೆರೆ, ಮಡಂತ್ಯಾರು, ಗೇರುಕಟ್ಟೆ, ಉಡುಪಿ ಜಿಲ್ಲೆಯ ಹೆಬ್ರಿ, ಹಿರಿಯಡಕ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗಾಳಿ, ಗುಡುಗು ಸಮೇತ ಮಳೆಯಾಗಿದೆ.ದಾವಣಗೆರೆ ನಗರದ ಕೆಲವೆಡೆ, ಹರಪನಹಳ್ಳಿ ಪಟ್ಟಣ ಸೇರಿ ತಾಲ್ಲೂಕಿನ ಕೆಲವೆಡೆ ತುಂತುರು ಮಳೆಯಾಯಿತು.
ಹುಬ್ಬಳ್ಳಿ ನಗರ, ಹಾವೇರಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ಸಂಜೆ ಕೆಲ ಕಾಲ ಗುಡುಗು ಸಹಿತ ಮಳೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಭಾಗದಲ್ಲಿ ಸಂಜೆ ಬಿರುಸಿನ ಮಳೆಯಾಯಿತು. ಶಿರಸಿ, ಸಿದ್ದಾಪುರ ತಾಲ್ಲೂಕುಗಳಲ್ಲಿ ಗುಡುಗು, ಮಿಂಚಿನ ಆರ್ಭಟದೊಂದಿಗೆ ಅರ್ಧ ತಾಸು ಮಳೆ ಸುರಿಯಿತು.