ಶಿವಮೊಗ್ಗ: ಇಲ್ಲಿನ ಗಾಂಧಿಬಜಾರ್ನಲ್ಲಿ ಯುವತಿಯೊಬ್ಬಳನ್ನು ಚುಡಾಯಿಸಿದ ಪ್ರಕರಣ ಶನಿವಾರ ರಾತ್ರಿ ಎರಡು ಕೋಮುಗಳ ಮಧ್ಯೆ ಘರ್ಷಣೆಗೆ ಕಾರಣವಾಗಿದೆ.
ಬಿ.ಎಚ್. ರಸ್ತೆಗೆ ಹೊಂದಿಕೊಂಡಿರುವ ‘ಮಲ್ನಾಡ್ ಫುಟ್ವೇರ್’ ಮಳಿಗೆಯಲ್ಲಿ ಪಾದರಕ್ಷೆ ಖರೀದಿಸಲು ಬಂದಿದ್ದ ಯುವತಿ ಜೊತೆ ಅಂಗಡಿಯ ಹುಡುಗ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಈ ವಿಷಯ ತಿಳಿದ ಯುವತಿಯ ಪೋಷಕರು ಅಂಗಡಿ ಮಾಲೀಕನ ಜತೆ ವಾಗ್ವಾದ ನಡೆಸಿದ್ದಾರೆ.
ಅಷ್ಟರಲ್ಲಿ ಘಟನೆ ಕೋಮು ಸ್ವರೂಪ ಪಡೆದುಕೊಂಡು ಹೊಡೆದಾಟದ ಹಂತ ತಲುಪಿದೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಲಾಠಿ ಬೀಸಿ ಗುಂಪು ಚದುರಿಸಿದ್ದಾರೆ.
ಈ ಸಮಯದಲ್ಲಿ ಕಲ್ಲುತೂರಾಟ ನಡೆದಿದೆ. ಇದರಿಂದ ಹಲವರಿಗೆ ಗಾಯಗಳಾಗಿದ್ದು, ಬಜರಂಗದಳದ ನಗರ ಸಂಚಾಲಕ ಮಾಲತೇಶ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಂಧಿಬಜಾರ್ ಎಂ.ಕೆ.ಕೆ. ರಸ್ತೆ, ಒ.ಟಿ. ರಸ್ತೆ ಸಂಚಾರ ಬಂದ್ ಮಾಡಿದ ಪೊಲೀಸರು, ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದೆ.