ಬೆಂಗಳೂರು: ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ಸುಮಾರು ₹40 ಕೋಟಿ ವೆಚ್ಚದಲ್ಲಿ ರೋಬಾಟಿಕ್ ಶಸ್ತ್ರ ಚಿಕಿತ್ಸಾ ವಿಭಾಗ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ.
ಮೂಳೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸರ್ಕಾರಿ ವಲಯದ ಆಸ್ಪತ್ರೆಗಳಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆ ವಿಭಾಗವನ್ನು ಸ್ಥಾಪಿಸುತ್ತಿರುವುದು ಇದೇ ಮೊದಲು. ಈ ತಂತ್ರಜ್ಞಾನದ ಮೂಲಕ ಅತ್ಯಂತ ನಿಖರವಾಗಿ ಮೂಳೆ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದೆ. ರೋಗಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ₹55.56 ಕೋಟಿ ವೆಚ್ಚದಲ್ಲಿ 100 ಹಾಸಿಗೆಗಳ ಸೌಲಭ್ಯವುಳ್ಳ ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯ ನೂತನ ಶಾಖೆ ಸ್ಥಾಪಿಸಲಾಗುವುದು. ಇದಕ್ಕೆ ಪುಟ್ಟರಾಜ ಗವಾಯಿ ಟ್ರಾಮ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರ ಎಂದು ಹೆಸರಿಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಶಿಕಾರಿಪುರಕ್ಕೆ ತಾಯಿ ಮಕ್ಕಳ ಆಸ್ಪತ್ರೆ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಧಾನಸಭಾ ಕ್ಷೇತ್ರ ಶಿಕಾರಿಪುರದಲ್ಲಿ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡವನ್ನು ₹15 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ 3 ಎಕರೆ ಜಾಗವನ್ನು ಕೆಎಚ್ಬಿ ವತಿಯಿಂದ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ.
ಪ್ರಮುಖ ನಿರ್ಧಾರಗಳು
* ಶಿವಮೊಗ್ಗ ನಗರದ ರೈಲ್ವೆ ಕಾಂಪೌಂಡ್ನಿಂದ ಹೊಸಪೇಟೆ– ಶಿವಮೊಗ್ಗ ರಸ್ತೆ ಸಂಪರ್ಕಿಸುವ 100 ಅಡಿ ವರ್ತುಲ ರಸ್ತೆಯನ್ನು ₹20 ಕೋಟಿ ಅಂದಾಜು ವೆಚ್ಚದಲ್ಲಿ ಅಭಿವೃದ್ಧಿ.
* ಆಡಳಿತದಲ್ಲಿ ದತ್ತಾಂಶ ವಿಜ್ಞಾನ ಅನ್ವಯಕ್ಕಾಗಿ ಮುಕ್ತ ದತ್ತಾಂಶ ಸಂಶೋಧನಾ ಕೇಂದ್ರದೊಂದಿಗೆ ಜ್ಞಾನ ಸಂಶೋಧನಾ ಕೇಂದ್ರದೊಂದಿಗೆ ಸಹಭಾಗಿತ್ವ.
*ಯಾದಗಿರಿ ಜಿಲ್ಲೆ ಯಾದಗಿರಿ ತಾಲ್ಲೂಕಿನಲ್ಲಿ ₹15 ಕೋಟಿ ವೆಚ್ಚದಲ್ಲಿಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ.
*ದಕ್ಷಿಣ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಶಾಂತಿ ಮೊಗೇರುವಿನಲ್ಲಿ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ. ಇದರ ಅಂದಾಜು ವೆಚ್ಚ ₹13.54 ಕೋಟಿ.
*ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಪೋಷಣಾ ಭತ್ಯೆಯನ್ನು ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿನ ಕ್ರೀಡಾಪಟುಗಳ ಪೋಷಣಾ ಭತ್ಯೆ ಸಮಾನವಾಗಿ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರತಿನಿತ್ಯ ₹300 ಪೋಷಣಾ ಭತ್ಯೆ ನೀಡಲಾಗುತ್ತಿದೆ. ರಾಜ್ಯ ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾ ಪಟುಗಳಿಗೆ ₹200 ನೀಡಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.