ಧಾರವಾಡ: ‘ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಉದಾರತೆ ಹೆಸರಿನಲ್ಲಿ ಸರ್ಕಾರಿ ಹಣದಲ್ಲಿ ಜೀವನ ನಡೆಸುವ ವಿಶಿಷ್ಟ ವರ್ಗವು ದೇಶ ವಿರೋಧಿ ಕೃತ್ಯದಲ್ಲಿ ತೊಡಗಿದೆ’ ಎಂದು ಬಿಜೆಪಿರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಆಪಾದಿಸಿದರು.
ಭಾನುವಾರ ಇಲ್ಲಿ ಆಯೋಜಿಸಿದ್ದ ಆರ್ಎಸ್ಎಸ್ ಜಿಲ್ಲಾ ಸಾಂಘಿಕ್ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸೈನಿಕರಿಗೆ, ಸ್ವಯಂಸೇವಕರಿಗೆ ಹಾಸ್ಯ ಮಾಡಲಿ ಒಪ್ಪುತ್ತೇವೆ. ಏಕೆಂದರೆ ನಗುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಅವರೊಂದಿಗೆ ನಾವೂ ನಗುತ್ತೇವೆ. ಆದರೆ, ಅವಮಾನ ಆಗುವಂಥ ಸಂಗತಿಗಳನ್ನು ಸಹಿಸುವುದಿಲ್ಲ. ಧಾರವಾಡ ಸಾಹಿತ್ಯ ಸಂಭ್ರಮದ ಆಯೋಜಕರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ನೇರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು.
‘ದೇಶದ ಗೌರವ, ಸಮಾಜದ ವ್ಯವಸ್ಥೆ, ಹಿಂದೂ ಎಂಬ ಸ್ವಾಭಿಮಾನ ಕಾಪಾಡಲು ಸಂಘದ ಸ್ವಯಂ ಸೇವಕರಿದ್ದಾರೆ. ಸವಾಲುಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಅವರಲ್ಲಿದೆ. ಸೈನಿಕರನ್ನು ರೇಪಿಸ್ಟರು ಎಂದು ಕರೆಯಲು ಸ್ವಾತಂತ್ರ್ಯ ಬೇಕಾದರೆ, ಸಾಹಿತ್ಯ ಸಂಭ್ರವವನ್ನು ಅಂಡಮಾನ್-ನಿಕೋಬಾರ್ನಲ್ಲಿ ಮಾಡಲಿ’ ಎಂದು ಹೇಳಿದರು.
‘ಮೂಲಭೂತ ಸ್ವಾತಂತ್ರ್ಯಕ್ಕೆ ಸಾಮಾಜಿಕ ಹಿತದ ಚೌಕಟ್ಟಿದೆ. ಮೂಲಭೂತ ಸ್ವಾತಂತ್ರ್ಯ ಎಂದರೆ ಮನಸ್ಸಿಗೆ ಬಂದಂತೆ ಬೇಕಾದ್ದು ಮಾಡಬಹದು; ಮಾತನಾಡಬಹುದೇ?, ವ್ಯಕ್ತಿ-ಸಮಾಜದ ಭಾವನೆ ಗಾಸಿ ಮಾಡಬಹುದೇ?’ ಎಂದು ಕೇಳಿದರು.
‘ವಿದೇಶಿ ಶಿಕ್ಷಣ ಪಡೆದು, ವಿದೇಶಿ ಮಾನಸಿಕತೆ ಅಳವಡಿಸಿಕೊಳ್ಳುವ, ವಿದೇಶ ಜೀವನವೇ ಶ್ರೇಷ್ಠ ಎನ್ನುವ ಅಧಿಕಾರಿಗಳು, ಜನರು ಎಲ್ಲ ಕಡೆಗಳಲ್ಲಿ ಇದ್ದಾರೆ’ ಎಂದರು.