ಉಜಿರೆ: ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕಕ್ಕೆ ಬಂದಿದ್ದ ಜೈನ ಮುನಿ ನಿಸ್ಪೃಹ ಸಾಗರ ಮುನಿಮಹಾರಾಜರು (75) ಮಂಗಳವಾರ ಬೆಳಿಗ್ಗೆ ಚಂದ್ರನಾಥ ಸ್ವಾಮಿ ಬಸದಿ ಬಳಿ ಮುನಿಗಳು ವಾಸ್ತವ್ಯ ಇರುವ ಕುಟೀರದಲ್ಲಿ ಸಮಾಧಿ ಮರಣ ಹೊಂದಿದರು.
ಸೋಮವಾರ ಅವರು ಅಮರಣಾಂತ ಉಪವಾಸ ಕೈಗೊಳ್ಳುವ ಸಲ್ಲೇಖನ ವ್ರತ ಧಾರಣೆ ಮಾಡಿದ್ದರು.
ಜೈನ ಸಂಪ್ರದಾಯದಂತೆ ಮರಣವೇ ಮಹಾನವಮಿ ಎಂದು ಭಾವಿಸಿ ಸಾವನ್ನು ಕೂಡ ಮಹೋತ್ಸವದಂತೆ ಆಚರಿಸಿ ಸಂಭ್ರಮಿಸುತ್ತಾರೆ. ಏಕೆಂದರೆ ಸಾವು ದೇಹಕ್ಕೆ ಮಾತ್ರ. ಆತ್ಮನಿಗೆ ಸಾವಿಲ್ಲ. ದೇಹ ನಶ್ವರ, ಆತ್ಮ ಶಾಶ್ವತ.
ನಿಸ್ಪೃಹ ಸಾಗರ ಮುನಿ ಮಹಾರಾಜರು ರಾಜಸ್ಥಾನದ ಕಿಶನ್ಗಢ ನಿವಾಸಿ. ಅವರ ಪೂರ್ವಾಶ್ರಮದ ಹೆಸರು ಪ್ರೇಮಚಂದ್ ಪಹಾಡಿಯಾ. 2009ರಲ್ಲಿ ಚಂಪಾಪುರಿಯಲ್ಲಿ ಮುನಿ ದೀಕ್ಷೆ ಪಡೆದಿದ್ದರು.
ಶ್ರೀ 108 ಆಚಾರ್ಯ ವರ್ಧಮಾನ ಸಾಗರ ಮುನಿ ಮಹಾರಾಜರು ಮತ್ತು ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಬಸದಿಯ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು.