ಬೆಂಗಳೂರು: ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಹಾಯ ಕೇಳಿದ್ದ ಆರು ವರ್ಷದ ಬಾಲಕಿಗೆ ಸಂಜಯ್ ಗಾಂಧಿ ಅಪಘಾತ ಮತ್ತು ಅಸ್ಥಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.
‘ಬಾಲಕಿಯ ಪೋಷಕರು ಸಹಾಯ ಕೇಳಿರುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕರೆ ಮಾಡಿ ತಿಳಿಸಿದರು. ಮುಖ್ಯಮಂತ್ರಿ ಪರಿಹಾರ ನಿಧಿಯ ಅನುದಾನದಡಿ ಉಚಿತ ಚಿಕಿತ್ಸೆ ನೀಡುವಂತೆ ಹೇಳಿದರು. ಸರ್ಜರಿ ಬಳಿಕ ಮಗು ನಡೆಯಲು ಆರಂಭಿಸಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಎಚ್.ಎಸ್.ಚಂದ್ರಶೇಖರ್ ಮಾಹಿತಿ ನೀಡಿದರು.
‘ಚುನಾವಣೆಯ ದಿನ ಬಾಗಲೂರಿನ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಆರು ವರ್ಷದ ಮಗಳು ಶ್ರೇಯಾಳ ಮೇಲೆ ಕಾರ್ ಹರಿಯಿತು. ಕಾಲು ಜಜ್ಜಿ ಹೋದಂತೆ ಆಗಿತ್ತು. ಬೇರೆ ಕಡೆ ಸರ್ಜರಿ ಮಾಡಲು ₹1 ಲಕ್ಷ ಬೇಕು ಎಂದು ಹೇಳಿದ್ದರು. ತಂದೆ (ನಾಗೇಂದ್ರ) ಹಾಗೂ ಮಗಳು ಎರಡು ತಿಂಗಳ ಹಿಂದೆ ಜನತಾದರ್ಶನಕ್ಕೆ ಹೋಗಿದ್ದರು. ಅದರ ಪರಿಣಾಮ ಇಲ್ಲಿ ಚಿಕಿತ್ಸೆ ದೊರೆತಿದೆ’ ಎಂದು ಮಗುವಿನ ತಾಯಿ ಪರಿಮಳಾ ಹೇಳಿದರು.
ಸರ್ಜರಿ ತಂಡದ ಡಾ. ಜಯಂತ್, ‘ತಿಂಗಳ ಹಿಂದೆ ಈ ಬಾಲಕಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಲು ತೀರ್ಮಾನ ಮಾಡಿದೆವು. ಚರ್ಮಕ್ಕೆ ಬೆರಳುಗಳು ಸಂಪೂರ್ಣವಾಗಿ ಅಂಟಿಕೊಂಡಿದ್ದವು. ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಸವಾಲುಗಳ ನಡುವೆಯೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು’ ಎಂದರು.