ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಪ್ರಮಥರ ಗಣಮೇಳ, ಸುಜ್ಞಾನ ಶಕ್ತಿ ಪ್ರದರ್ಶನ: ಶಿವಮೂರ್ತಿ ಮುರುಘಾ ಶರಣರು

ಅಸಂಖ್ಯ ಪ್ರಮಥರ ಗಣಮೇಳ ಇಂದು
Last Updated 16 ಫೆಬ್ರುವರಿ 2020, 2:28 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಜ್ಞಾನ, ಸದ್ಭಾವಗಳ ದರ್ಶನದ ಶಕ್ತಿ ಪ್ರದರ್ಶನವೇ ಅಸಂಖ್ಯ ಪ್ರಮಥರ ಗಣಮೇಳದ ಉದ್ದೇಶ’ ಎಂದುಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ‍‍ಪ್ರತಿಪಾದಿಸಿದರು.

ಇಲ್ಲಿ ಭಾನುವಾರ ನಡೆಯಲಿರುವ ಗಣಮೇಳದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ, ‘ಶೋಷಣೆ ರಹಿತ ಸಮಾಜ ನಿರ್ಮಾಣ ಮತ್ತು ಬಸವ ಧರ್ಮವನ್ನು ಇಡೀ ವಿಶ್ವಕ್ಕೆ ತಲುಪಿಸುವ ಆಶಯ ಇದರ ಹಿಂದಿದೆ’ ಎಂದು ಅವರು ಹೇಳಿದರು. ಸಂದರ್ಶನದ ವಿವರ ಹೀಗಿದೆ.

*ಗಣಮೇಳ ಲಿಂಗಾಯತ ಧರ್ಮದ ಅಥವಾ ಕೆಲ ವ್ಯಕ್ತಿಗಳ ಶಕ್ತಿ ಪ್ರದರ್ಶನದ ವೇದಿಕೆಯೇ?
ಇದು ಶರಣರ ಸೈದ್ಧಾಂತಿಕ, ತಾತ್ವಿಕ, ಆದರ್ಶಗಳ ಅನುಭಾವ ದರ್ಶನದ ವೇದಿಕೆಯಾಗಲಿದೆ ವಿನಾ ಶಕ್ತಿ ಪ್ರದರ್ಶನವಲ್ಲ. ಎಲ್ಲ ಜಾತಿ ಮತ್ತು ಧರ್ಮಗಳನ್ನೊಳಗೊಂಡ ಸರ್ವ ಶರಣರ ಸಮ್ಮೇಳನದ ಇದಾಗಿದೆ.

*ಈ ಮೇಳಕ್ಕೆ ಪ್ರೇರಣೆ ಏನು?
ಕಳೆದ ಮೂವತ್ತು ವರ್ಷಗಳಿಂದ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶರಣ ಸಂಸ್ಕೃತಿ, ಸಹಜ ಶಿವಯೋಗ ಮುಂತಾದ ಕಾರ್ಯಕ್ರಮಗಳ ಮೂಲಕ ಬಸವತತ್ವದ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇತಿಹಾಸ ಸೃಷ್ಟಿಸುವ ಕಾರ್ಯಕ್ರಮ ಮಾಡಬೇಕು ಎನ್ನುವ ಆಲೋಚನೆಯನ್ನು ಕೆಲವರು ಮುಂದಿಟ್ಟರು. ನಮ್ಮದು ಅಮರಗಣದ ಸಂಸ್ಕೃತಿಯಾಗಿರುವುದರಿಂದ ಗಣಮೇಳ ರೂಪಿಸಲಾಯಿತು.

*ಲಿಂಗಾಯತ ಸ್ವತಂತ್ರ್ಯ ಧರ್ಮದ ಕೂಗು ಈ ಸಮಾವೇಶದಲ್ಲಿ ಕೇಳಿಬರಲಿದೆಯೇ?
ಲಿಂಗಾಯತ ಧರ್ಮದ ಬಗ್ಗೆ ಈಗ ನಾವು ಏನೂ ಹೇಳಲು ಸಾಧ್ಯವಿಲ್ಲ. ಸದ್ಯ ಗಣಮೇಳದ ಯಶಸ್ವಿಗೆ ಮಾತ್ರ ಸೀಮಿತವಾಗಿದ್ದೇವೆ.

*ಬಸವಣ್ಣನವರ ಕಾಲದ ಗಣಮೇಳದ ಪರಿಕಲ್ಪನೆ ಈಗಲೂ ಪ್ರಸ್ತುತವೇ?
ಇದು ಏಕಜಾತಿ ಸಂಘಟನೆಗೆ ರೂಪಿಸಿದ ಸಮಾವೇಶವಲ್ಲ. ಜಾತಿಯ ಸಂಕುಚಿತ ಮನೋಭಾವ ತೊರೆದು ಮುಂದೆ ಸಾಗಬೇಕಾಗಿದೆ. ಜಗತ್ತು ಈಗ ಹಿಂಸೆ, ದೌರ್ಜನ್ಯದಲ್ಲಿ ನಲುಗುತ್ತಿದೆ. ಇಂತಹ ಸನ್ನಿವೇಶದಲ್ಲಿ ವೈಷಮ್ಯ ತೊರೆದು ಸೌಹಾರ್ದಯುತ ಸಮಾನತೆಯ ಸಮಾಜ ಕಟ್ಟಬೇಕಾಗಿದೆ. ಬಸವಣ್ಣನವರ ಆದರ್ಶದ ಅನುಷ್ಠಾನದ ಆಶಯದೊಂದಿಗೆ ಈ ಗಣಮೇಳ ಆಯೋಜಿಸಲಾಗಿದೆ.

*ಬಸವ ತತ್ವವನ್ನು ವಿರಕ್ತಮಠಗಳು ತಾತ್ವಿಕವಾಗಿಯೇ ಒಪ್ಪಿಕೊಂಡಿದ್ದರೂ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆಯಲ್ಲವೇ?
ಕೆಲ ವಿರಕ್ತಮಠಗಳು ವೈದಿಕತೆಗೆ ವಾಲುತ್ತಿರುವುದು ವಿಷಾದನೀಯ. ಬಸವ ತತ್ವ ಸರಳವಾಗಿದ್ದು, ಶೋಷಣೆಯ ವಿರೋಧಿಯಾಗಿದೆ. ಮೂಢನಂಬಿಕೆಗಳ ಬಂಧನದಿಂದ ಬಿಡುಗಡೆಗೊಳಿಸುವ ವ್ಯವಸ್ಥೆಯೂ ಆ ತತ್ವದಲ್ಲಿದೆ. ಆದರೆ, ಸಂಪ್ರದಾಯವಾದಿಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆಡಂಬರದತ್ತ ಜನರನ್ನು ಕರೆದೊಯ್ಯುತ್ತಿದ್ದಾರೆ. ಆಡಂಬರದಲ್ಲಿ ಆಕರ್ಷಣೆಯೂ ಇರುವುದರಿಂದ ಸಹಜವಾಗಿ ಜನರ ಗಮನಸೆಳೆಯುತ್ತದೆ. ಹೀಗಾಗಿ, ಬದಲಾವಣೆಗಾಗಿ ಹೋರಾಟ ನಿರಂತರ ನಡೆಯುತ್ತದೆ. ಮಠಗಳು ಬದಲಾವಣೆ ತರಬೇಕು ಎನ್ನುವುದು ಸಮಾಜದ ನಿರೀಕ್ಷೆಯೂ ಆಗಿದೆ. ಕೆಲವರು ಆಚರಣೆಗೆ ಹತ್ತಿರವಾಗಿದ್ದಾರೆ. ಇನ್ನೂ ಹಲವರು ಮಠ ಸಂಸ್ಕೃತಿಯನ್ನು ಜಾತ್ರೆ, ರಥೋತ್ಸವಗಳಿಗೆ ಸೀಮಿತಗೊಳಿಸಿದ್ದಾರೆ. ಇದು ಉತ್ತಮ ನಡವಳಿಕೆ ಅಲ್ಲ. ಜಾತ್ರೆ, ತೇರು, ರಥೋತ್ಸವದಲ್ಲಿ ಸಾತ್ವಿಕ, ತಾತ್ವಿಕ ನೈತಿಕತೆಯ ಜಂಗಮ ಮಾಯವಾಗುತ್ತಾನೆ. ಜಾತ್ರೆಗಳಿಂದ ಜೀವನಕ್ಕೆ ಬೇಕಾದ ಸಂದೇಶ ನೀಡಲು ಸಾಧ್ಯವಾಗುವುದಿಲ್ಲ.

*ಬಹುತೇಕ ವಿರಕ್ತ ಮಠಗಳು ವಂಶಪಾರಂಪರ್ಯ ಆಡಳಿತಕ್ಕೆ ಒಳಗಾಗಿವೆಯಲ್ಲ?
ವಂಶಪರಂಪರೆಯೂ ಸಹ ಬಸವತತ್ವ ಅನುಷ್ಠಾನಕ್ಕೆ ಹಿನ್ನಡೆಗೆ ಕಾರಣ. ಬಸವತತ್ವ ಬೋಧನೆಯಿಂದ ಹಣ, ಕೀರ್ತಿ, ಪ್ರತಿಷ್ಠೆ ಬರುವುದಿಲ್ಲ ಎನ್ನುವ ಕೀಳರಿಮೆ ಮೂಡಿರುವುದು ವಿಷಾದನೀಯ. ವಿರಕ್ತ ಮಠಾಧೀಶರು ಬಸವತತ್ವದಿಂದ ದೂರವಿದ್ದು, ಆಂತರ್ಯದಲ್ಲಿ ಮೌಢ್ಯಚಾರಣೆಗಳನ್ನು ನಂಬಿಕೊಂಡಿದ್ದಾರೆ.

ನೈಸ್ ರಸ್ತೆ ಬಳಿ ನಂದಿ ಗ್ರೌಂಡ್ ಸಜ್ಜು
ಬೆಂಗಳೂರು: ಬಸವಣ್ಣನವರ ಕಾಲದಲ್ಲಿ ನಡೆದಿದ್ದ ಗಣಗಳ ಸಮಾವೇಶದ ಮಾದರಿಯಲ್ಲಿ ಭಾನುವಾರ(ಫೆ.16) ನಡೆಯಲಿರುವ ಮೊದಲನೇ ಅಸಂಖ್ಯ ಪ್ರಮಥರ ಗಣಮೇಳಕ್ಕೆ ನೈಸ್‌ ರಸ್ತೆ ಬಳಿಯ ನಂದಿ ಗ್ರೌಂಡ್‌ ಸಜ್ಜಾಗಿದೆ.

500ಕ್ಕೂ ಹೆಚ್ಚು ಧರ್ಮಗುರುಗಳು, 2 ಲಕ್ಷಕ್ಕೂ ಅಧಿಕ ಜನರು ಈ ಗಣಮೇಳಕ್ಕೆ ಸಾಕ್ಷಿಯಾಗಲಿದ್ದಾರೆ ಎಂಬುದು ಆಯೋಜಕರ ನಿರೀಕ್ಷೆ. ನೆಲಮಂಗಲದಿಂದ ನೈಸ್ ರಸ್ತೆ ತನಕ ಸಮ್ಮೇಳನಕ್ಕೆ ಸ್ವಾಗತ ಕೋರುವ ಫಲಕಗಳನ್ನು ಅಲ್ಲಲ್ಲಿ ರಾರಾಜಿಸುತ್ತಿವೆ. ಮೈದಾನದಲ್ಲಿ ದೊಡ್ಡ ಪೆಂಡಾಲ್ ನಿರ್ಮಾಣವಾಗಿದ್ದು, ಸಮ್ಮೇಳನಕ್ಕೆ ಜನರನ್ನು ಕರೆ ತರುವ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

‘3,500 ಬಸ್‌ಗಳಲ್ಲಿ ಜನರು ಬರಲಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಗಣಮೇಳ ಚಾರಿತ್ರಿಕ ದಾಖಲೆಯಾಗಲಿದ್ದು,ಪಕ್ಷಾತೀತವಾಗಿ ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ನಡೆಯುತ್ತಿರುವ ಸರ್ವ ಶರಣರ ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು’ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

‘ಬೆಳಿಗ್ಗೆ 8ಕ್ಕೆ ಶಿವಯೋಗ ಸಂಭ್ರಮವನ್ನು ಶಿವಮೂರ್ತಿ ಮುರುಘಾ ಶರಣರು ನೇತೃತ್ವದಲ್ಲಿ ನಡೆಯಲಿದೆ. 10.30ಕ್ಕೆ ಗಣಮೇಳಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಮುರುಘಾ ಶರಣರ ‘ಮಹಾಬೆರಗು’ ಪುಸ್ತಕದ ಇಂಗ್ಲಿಷ್‌ ಅನುವಾದಿತ ಕೃತಿ ಲೋಕಾರ್ಪಣೆಗೊಳ್ಳಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT