ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಅನ್ಯಾಯ: ಜನ ಬಡಿಗೆ ಹಿಡಿಯಲಿದ್ದಾರೆ ಎಂದ ಸಿದ್ದರಾಮಯ್ಯ

ಸಂತ್ರಸ್ತರಿಗೆ ಸೂರಿಲ್ಲ: ‘ಪ್ರಜಾವಾಣಿ’ ವರದಿ ಉಲ್ಲೇಖ
Last Updated 20 ಫೆಬ್ರುವರಿ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ರಾಮರಾಜ್ಯ ನಿರ್ಮಾಣವಾಗಲಿದೆ ಎಂದು ಬಿಜೆಪಿಯವರು ಘಂಟಾಘೋಷವಾಗಿ ಸಾರಿದ್ದರು. ಕೇಂದ್ರ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದೆ. ಇದು ರಾಮರಾಜ್ಯವೇ’ ಎಂದು ಕಟುವಾಗಿ ಪ್ರಶ್ನಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಇದೇ ಪರಿಸ್ಥಿತಿ ಮುಂದುವರಿದರೆ ಜನರು ಬಡಿಗೆ ಹಿಡಿದುಕೊಂಡು ನಿಮಗೆ ಬಡಿಯಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಅನುದಾನ ಕಡಿತಕ್ಕೆ ಆಕ್ಷೇಪ’ ಹಾಗೂ ‘ಸಚಿವರೇ ದಮ್ಮಯ್ಯ ಇತ್ತ ನೋಡಿ’ ವರದಿಗಳನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಸ ಸಂತ್ರಸ್ತರಿಗೆ ಸೂರು ಕಲ್ಪಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದೂ ಹೇಳಿದರು.

‘‍ಪ್ರಕೃತಿ ವಿಕೋಪದಿಂದ ₹1 ಲಕ್ಷ ಕೋಟಿಗೂ ಹೆಚ್ಚು ಹಾನಿ ಸಂಭವಿಸಿದ್ದರೂ, ಕೇಂದ್ರ ಅಲ್ಪ ‍ಪರಿಹಾರ ನೀಡಿದೆ. ಇದು ರಾಜ್ಯ ಸರ್ಕಾರವನ್ನು ಅಣಕ ಮಾಡಲೆಂದೇ ಬಿಡುಗಡೆ ಮಾಡಿರುವ ಮೊತ್ತ. ನಿಮ್ಮ ವರ್ತನೆಯಿಂದ ರಾಜ್ಯಕ್ಕೆ ಘೋರ ಅನ್ಯಾಯವಾಗಿದೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಕೆಲವು ಸಚಿವರು ಜಿಲ್ಲಾ ಪ್ರವಾಸವನ್ನೇ ಮಾಡಿಲ್ಲ. ಪ್ರವಾಹಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ವಸತಿ ಸಚಿವರು ತಲಾ ನಾಲ್ಕು ಬಾರಿಯಷ್ಟೇ ಭೇಟಿ ನೀಡಿದ್ದಾರೆ. ಜನರು ಛೀಮಾರಿ ಹಾಕುತ್ತಾರೆ ಎಂಬ ಭಯದಿಂದ ಸಚಿವರು ಹೋಗಿಲ್ಲ. ಸಚಿವರಿಗೆ ಜನರ ಸಂಕಷ್ಟ ಆಲಿಸುವುದಕ್ಕಿಂತ ದಸರಾ ಆಚರಣೆಗೆ ಮುಖ್ಯ
ವಾಯಿತು’ ಎಂದು ಕಿಡಿಕಾರಿದರು.

ಕೇಂದ್ರದಿಂದ ಘೋರ ಅನ್ಯಾಯ: ಕೇಂದ್ರದಿಂದ ರಾಜ್ಯಕ್ಕೆ ಘೋರ ಅನ್ಯಾಯ ಹಾಗೂ ಅವಮಾನವಾಗಿದೆ ಎಂದ ಅವರು, ‘ಜಿಎಸ್‌ಟಿ ಸಂಬಂಧ ಹಣದಲ್ಲಿ ಡಿಸೆಂಬರ್‌ ಅಂತ್ಯಕ್ಕೆ ₹6,613 ಕೋಟಿ ಬಾಕಿ ಇದೆ. ಜನವರಿ ಹಾಗೂ ಫೆಬ್ರುವರಿಯ ಮೊತ್ತ ಸೇರಿದರೆ ₹13 ಸಾವಿರ ಕೋಟಿ ಆಗಲಿದೆ’ ಎಂದರು.

15ನೇ ಹಣಕಾಸು ಆಯೋಗದ ವರದಿ ಪ್ರಕಾರ ನಮ್ಮ ರಾಜ್ಯಕ್ಕೆ ಇನ್ನು ಮುಂದೆ ಪ್ರತಿವರ್ಷ ₹10 ಸಾವಿರ ಕೋಟಿಯಷ್ಟು ಅನುದಾನ ಕೊರತೆ ಬೀಳುತ್ತದೆ. ಐದು ವರ್ಷಗಳಲ್ಲಿ ಈ ಮೊತ್ತ ₹50 ಸಾವಿರ ಕೋಟಿ ಆಗಲಿದೆ. ಬಿಜೆಪಿಯ 25 ಸಂಸದರು ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಪ್ರಧಾನಿ ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಲು ಪ್ರಯತ್ನವನ್ನೇ ಮಾಡಿಲ್ಲ. ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ’ ಎಂದು ಕಿಡಿಕಾರಿದರು.

‍ಪ್ರವಾಹ ಹಾಗೂ ಬರದಿಂದ ರಾಜ್ಯತತ್ತರಿಸಿ ಹೋಗಿದೆ. ಈಗ ಅನುದಾನ ಕಡಿತದ ಮೂಲಕ ಕೇಂದ್ರ ಸರ್ಕಾರ ನಾಡಿನ ಚಿತೆಗೆ ತುಪ್ಪ ಸುರಿದು ಬೆಂಕಿಹಚ್ಚುತ್ತಿದೆ. ಇದನ್ನು ನಾವು ಸಂಭ್ರಮಿಸಬೇಕೇ? ಎಂದೂ ಪ್ರಶ್ನಿಸಿದರು.

‘ಗುಜರಾತಿಗೇಕೆ ನಮ್ಮ ದುಡ್ಡು‘
‘ರಾಜ್ಯದ ಜನರು ₹1 ತೆರಿಗೆ ಕಟ್ಟಿದರೆ ಪಡೆಯುವುದು 40 ಪೈಸೆ ಮಾತ್ರ. ಉತ್ತರ ಪ್ರದೇಶದ ಜನರು ₹2.56 , ಬಿಹಾರದ ಜನರು ₹2.98 ಪಡೆಯುತ್ತಿದ್ದಾರೆ. ಗುಜರಾತ್‌ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ ನಾಡಿಗೆ ₹235 ಹಂಚಿಕೆಯಾಗುತ್ತಿದೆ. ಬಿಹಾರ, ಉತ್ತರ ಪ್ರದೇಶ ರಾಜ್ಯಗಳು ಆರ್ಥಿಕವಾಗಿ ಹಿಂದುಳಿದಿವೆ. ಗುಜರಾತಿಗೇನಾಗಿದೆ? ಗುಜರಾತಿನ ಉದ್ಧಾರಕ್ಕೆ ಕರ್ನಾಟಕದ ಜನರೇಕೆ ದುಡ್ಡು ಕೊಡಬೇಕು’ ಎಂದು ಸಿದ್ದರಾಮಯ್ಯ ಕಟುವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT