ಬೆಂಗಳೂರು: ಈ ವರ್ಷದ ಫೆಬ್ರವರಿ 3ರಂದು ನಡೆದ ಟಿಇಟಿ ಪರೀಕ್ಷೆಯ ಪ್ರಶ್ನೆಪತ್ರಿಕೆ 2ರಲ್ಲಿ ಕೇಳಲಾದ 117ನೇ ಪ್ರಶ್ನೆಯಲ್ಲಿ ಸರಿಯಾದ ಉತ್ತರದ ಆಯ್ಕೆ ಇರಲಿಲ್ಲ. ಹಾಗಾಗಿ ಈ ಪ್ರಶ್ನೆಗೆ ಕೃಪಾಂಕ ನೀಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
‘ಭಾರತದ ಪೂರ್ವ ಘಟ್ಟದಲ್ಲಿ ಅತಿ ಎತ್ತರದ ಶಿಖರವೆಂದರೆ’ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಆನೈಮುಡಿ, ಮಹೇಂದ್ರಗಿರಿ, ಕಾಂಚನಗಂಗಾ, ಕಾಶಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಇಲಾಖೆ ಪ್ರಕಟಿಸಿದ ‘ಕೀ ಉತ್ತರ’ಗಳಲ್ಲಿ ‘ಮಹೇಂದ್ರಗಿರಿ’ ಸರಿ ಉತ್ತರ ಎಂದು ಗುರುತಿಸಲಾಗಿದೆ.
ಆದರೆ, ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಪುಟ ಸಂಖ್ಯೆ 93ರಲ್ಲಿ ‘ಪೂರ್ವ ಘಟ್ಟಗಳಲ್ಲಿ ಎತ್ತರವಾದ ಶಿಖರ ಆರ್ಮಕೊಂಡ’ ಎಂದು ಉಲ್ಲೇಖಿಸಲಾಗಿದೆ. ಈ ಆಯ್ಕೆಯು ಪ್ರಶ್ನೆಪತ್ರಿಕೆಯಲ್ಲಿ ಇರಲಿಲ್ಲವಾದ್ದರಿಂದ, ಈ ಪ್ರಶ್ನೆಗೆ ಉತ್ತರಿಸಿದ ಎಲ್ಲರಿಗೂ ‘ಕೃಪಾಂಕ’ ನೀಡಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.