ಹುಬ್ಬಳ್ಳಿ: ನನಗಿಂತ ಒಳ್ಳೆಯ ಹಿಂದು ಬಿಜೆಪಿಯಲ್ಲಿ ಯಾರಿದ್ದಾರೆ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಶ್ನಿಸಿದರು.
ತಿಲಕದ ಕುರಿತು ನಾನು ಆಡಿರುವ ಮಾತನ್ನು ತಿರುಚಲಾಗಿದೆ. ಮಹಿಳೆಯರು ಹಣೆಗೆ ಇಡುವ ತಿಲಕದ ಬಗ್ಗೆ ನಾನು ಮಾತನಾಡಿಲ್ಲ. ನಾನು ತಿಲಕ ವಿರೋಧಿಯಲ್ಲ. ಕ್ರಿಮಿನಲ್ಗಳು ಮಾತ್ರ ಹಣೆಗೆ ಉದ್ದನೆಯ ನಾಮ ಬಡಿದುಕೊಳ್ಳುತ್ತಾರೆ. ಅಂಥವರನ್ನು ಕಂಡರೆ ಭಯ ಎಂದು ಹೇಳಿದ್ದೆ ಎಂದರು.
ದೇಶದ ರಕ್ಷಣೆ, ಕಾಶ್ಮೀರ ವಿಷಯದಲ್ಲಿ ಕಾಂಗ್ರೆಸ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿದೆ. ಆದರೆ, ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ದೇಶದ ರಕ್ಷಣೆ ಯಾವುದೇ ಪಕ್ಷದ ಮೊದಲ ಆದ್ಯತೆಯಾಗಬೇಕು. ರಾಜಕೀಯಕ್ಕೆ ಬಳಸಿಕೊಳ್ಳಬಾರದು. ದೇಶದ ಸೈನಿಕರು, ರೈತರ ವಿಷಯದಲ್ಲಿ ಕಾಂಗ್ರೆಸ್ಗೆ ಇರುವಷ್ಟು ಗೌರವ ಬಿಜೆಪಿ, ಆರ್ಎಸ್ಎಸ್ಗೆ ಇಲ್ಲ ಎಂದರು.
ಗೊಂದಲವಿಲ್ಲದೆ ಸೀಟು ಹಂಚಿಕೆ: ಪರಮೇಶ್ವರ ಯಾವುದೇ ಗೊಂದಲ ಇಲ್ಲದೆ ಕಾಂಗ್ರೆಸ್, ಜೆಡಿಎಸ್ ನಡುವೆ ಲೋಕಸಭಾ ಸೀಟು ಹಂಚಿಕೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.
ವಿವಿಧ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಇದೇ 11 ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ. ಪ್ರತಿಯೊಂದು ಕ್ಷೇತ್ರಕ್ಕೆ ಎರಡು ಮೂರು ಹೆಸರುಗಳನ್ನು ಸೂಚಿಸಲಾಗಿದೆ ಎಂದರು.
ಮಂಡ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಯಾವುದೇ ಗೊಂದಲ ಇಲ್ಲದೆ ಸೀಟು ಹಂಚಿಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು ಅವರು ಹೇಳಿದರು.