ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮದಿಂದ 52 ಲಕ್ಷ ಉದ್ಯೋಗ: ಸಚಿವ ಸಿ.ಟಿ.ರವಿ

‘ಹೊಸ ದಿಕ್ಕು, ಹೊಸ ಕಲ್ಪನೆಯಿಂದ ಕಾಯಕಲ್ಪ’
Last Updated 12 ನವೆಂಬರ್ 2019, 19:36 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು ನೀಡುವ ಮೂಲಕ ಮುಂದಿನ ದಿನಗಳಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 52 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಉದ್ದೇಶಿಸಲಾಗಿದೆ ಎಂದುಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

‘ಪ್ರವಾಸೋದ್ಯಮದ ಸಮಸ್ಯೆ ಗಳೇನು’ ಎಂಬ ವಿಷಯದ ಕುರಿತು ಮಂಗಳವಾರ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಮೂಲಕ ಪ್ರವಾಸೋದ್ಯಮದಆದಾಯದ ಪ್ರಮಾಣವನ್ನು ಶೇ 20 ರಷ್ಟು ಹೆಚ್ಚಿಸಬಹುದಾಗಿದೆ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

‘ಕರ್ನಾಟಕ ಭಾರತದಲ್ಲೇ ಅತ್ಯಂತ ವಿಶಿಷ್ಟ ರಾಜ್ಯ. ಪ್ರವಾಸೋದ್ಯಮಕ್ಕೆ ನಮ್ಮ ರಾಜ್ಯದಲ್ಲಿರುವಷ್ಟು ವೈವಿಧ್ಯ ಅವಕಾಶಗಳು ಇತರ ರಾಜ್ಯಗಳಲ್ಲಿಲ್ಲ. ಆ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಉದ್ದೇಶಿಸಿದ್ದೇವೆ. ಇದಕ್ಕಾಗಿ ಖಾಸಗಿ ಸಹಭಾಗಿತ್ವವನ್ನು ಪಡೆಯಲಾಗುವುದು. ಮೂಲ ಸೌಕರ್ಯ, ಕೌಶಲ ಅಭಿವೃದ್ಧಿ ಮತ್ತು ತರಬೇತಿಗೂ ಒತ್ತು ನೀಡಲಾಗುವುದು’ ಎಂದು ಅವರು ಹೇಳಿದರು.

ಅಧ್ಯಾತ್ಮ, ಪರಿಸರ, ದೇವಾಲಯ, ಐತಿಹಾಸಿಕ ತಾಣಗಳು, ಸಾಹಸ ಕ್ರೀಡೆ, ಜಲ ಕ್ರೀಡೆ ಸೇರಿದಂತೆ ಬಹು ಆಯಾಮಗಳ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಕೇವಲ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಹೋಗುವುದಕ್ಕೆ ಬದಲು, ಆಯಾ ಸ್ಥಳದ ಸಂಸ್ಕೃತಿ, ಜನ ಜೀವನ, ಆಹಾರ– ವಿಹಾರಗಳ ಅನುಭವವನ್ನು ಕಟ್ಟಿಕೊಡಲು ಆದ್ಯತೆ ನೀಡಲಾಗುವುದು ಎಂದರು.

ರಾಜ್ಯದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ 14.8 ಇದ್ದು, ಅದನ್ನು ಶೇ 20 ಕ್ಕೆ ಹೆಚ್ಚಿಸಲು ಅವಕಾಶವಿದೆ. ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಇನ್ನೂ ಬೆಳಕಿಗೆ ಬಾರದ ಹಲವು ಪ್ರವಾಸಿ ತಾಣಗಳನ್ನು ಪತ್ತೆ ಮಾಡಿ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಇದಕ್ಕಾಗಿ ಜಿಲ್ಲೆ ಮತ್ತು ರಾಜ್ಯ ಮಟ್ಟದ ಫೋಟೊ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT