ಉಡುಪಿ: ನಾಪತ್ತೆಯಾಗಿರುವ ‘ಸುವರ್ಣ ತ್ರಿಭುಜ’ ಬೋಟ್ ಪತ್ತೆಗೆ ಸೋನಾರ್ ತಂತ್ರಜ್ಞಾನ ಬಳಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಶಿಪ್ ಹಾಗೂ ಸಬ್ ಮರೀನ್ಗಳಲ್ಲಿ ಬಳಸುವ ಸೋನಾರ್ ತಂತ್ರಜ್ಞಾನದಿಂದ ಸಮುದ್ರದಡಿಯ ಅವಶೇಷಗಳನ್ನು ಹುಡುಕಬಹುದು. ವಿಮಾನ, ಹಡಗು ಹಾಗೂ ಬೋಟ್ಗಳು ಸಮುದ್ರದೊಳಗೆ ಪತನವಾದರೆ ಸೋನಾರ್ ನೆರವಿನಿಂದ ಪತ್ತೆ ಹಚ್ಚಬಹುದು.
ಸಮುದ್ರದ ಆಳದಲ್ಲಿ ಧ್ವನಿ ಹಾಗೂ ದಿಕ್ಕನ್ನು ಆಧರಿಸಿ ಸೋನಾರ್ ಶೋಧ ನಡೆಸುತ್ತದೆ. ಸುವರ್ಣ ತ್ರಿಭುಜ ಬೋಟ್ ಸಂಪರ್ಕ ಕಡಿತಗೊಳ್ಳುವ ಮೊದಲು ರವಾನಿಸಿದ್ದ ಕೊನೆಯ ಸಂದೇಶವನ್ನು ಆಧರಿಸಿ, ಮಹಾರಾಷ್ಟ್ರದ ಮಾಲ್ವಾನ್ ಹಾಗೂ ಸಿಂಧುದುರ್ಗ ಸಮುದ್ರ ವ್ಯಾಪ್ತಿಯಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಕರಾವಳಿ ಕಾವಲು ಪಡೆ, ಪೊಲೀಸರ ತಂಡ ಹಾಗೂ ಮೀನುಗಾರರು ಪ್ರತ್ಯೇಕವಾಗಿ ಹುಡುಕಾಟ ನಡೆಸುತ್ತಲೇ ಇದ್ದಾರೆ.