ಬಳ್ಳಾರಿ: ‘ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಸರ್ಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ನವರು ಸಿಕ್ಕಾಪಟ್ಟೆ ಹಣ ಹಂಚಿ ಗೆಲುವು ಸಾಧಿಸಿದ್ದಾರೆ’ ಎಂದು ಶಾಸಕ ಬಿ.ಶ್ರೀರಾಮುಲು ದೂರಿದರು.
ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ನಗರದ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಕಾರ್ಯಕರ್ತರು ಹರಸಾಹಸ ಪಟ್ಟಿದ್ದರು. ಆದರೆ ಭಗವಂತ ಫಲಕೊಟ್ಟಿಲ್ಲ. ಸೋಲಿನ ಜವಾಬ್ದಾರಿ ನಾನೇ ವಹಿಸಿಕೊಳ್ಳುತ್ತೇನೆ’ ಎಂದರು.
‘ಸೋತಿದ್ದೇನೆಂದು ಯಾರನ್ನೂ ದ್ವೇಷಿಸಲ್ಲ. ಜನಾದೇಶಕ್ಕೆ ನಾವು ತಲೆಬಾಗುತ್ತೇವೆ. ಜನರು ನನ್ನನ್ನು ತಿರಸ್ಕರಿಸಿದ್ದಾರೆ. ಆದೆ ಈ ಫಲಿತಾಶ ಸಾರ್ವತ್ರಿಕ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀೀರಲ್ಲ’ ಎಂದು ಪ್ರತಿಪಾದಿಸಿದರು.
‘ನಮ್ಮ ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷದವರ ಪ್ರಾಬಲ್ಯವಿತ್ತು, ಹೀಗಾಗಿ ಅವರು ಗೆದ್ದಿದ್ದಾರೆ. ಬಳ್ಳಾರಿ ಕ್ಷೇತ್ರದ ಸೋಲು ನಮಗಾದ ಹಿನ್ನಡೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ’ ಎಂದರು.