ಬಾಗಲಕೋಟೆ: ‘ಯಡಿಯೂರಪ್ಪ ನಂತರರಾಜ್ಯದಲ್ಲಿ ಲಿಂಗಾಯತ ಸಮಾಜದವರು ಮುಖ್ಯಮಂತ್ರಿಯಾಗಬೇಕೆಂದರೆ ಅದು ಪಂಚಮಸಾಲಿಯವರೇ ಆಗಬೇಕು’ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಹೇಳಿದರು.
ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಜಯಂತಿ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
‘ಪಂಚಮಸಾಲಿ ಸಮಾಜದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅಥವಾ ಮುರುಗೇಶ ನಿರಾಣಿ ಆಗಿರಬಹುದು. ಒಟ್ಟಿನಲ್ಲಿ ಪಂಚಮಸಾಲಿ ಸಮುದಾಯದವರೇ ಸಿಎಂ ಆಗಬೇಕು’ ಎಂದರು.
‘ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಿರುವ ವ್ಯಕ್ತಿಯೇ ಮುಂದೊಂದು ದಿನ ರಾಜ್ಯದ ಚುಕ್ಕಾಣಿ ಹಿಡಿಯುತ್ತಾರೆ.ಶಾಸಕ ಬಸನಗೌಡ ಪಾಟೀಲ ಯತ್ನಾಳಮುಂದೊಂದು ದಿನ ಸಿಎಂ ಆಗುತ್ತಾರೆ’ ಎಂದು ಭವಿಷ್ಯ ನುಡಿದರು.
‘ಶಾಸಕ ಯತ್ನಾಳ ಅವರು ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡಿದ್ದಕ್ಕೆ ಕೇಂದ್ರದಿಂದ ₹ 1,200 ಕೋಟಿ ಪರಿಹಾರ ಬಂದಿದೆ. ಪ್ರವಾಹ ಬಂದಾಗ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದು ಶಾಸಕ ಯತ್ನಾಳ ಮಾತ್ರ. ಉತ್ತರ ಕರ್ನಾಟಕದ ಜನರ ಹಿತ ಬಯಸುವ ನಿಷ್ಠುರ ವ್ಯಕ್ತಿತ್ವ ಅವರದ್ದು’ ಎಂದರು.