ಬೆಂಗಳೂರು: ಶಿವಳ್ಳಿ ಬ್ರಾಹ್ಮಣ ಹುಡುಗರ ಕುರಿತ ಹೇಳಿಕೆಗೆ ತುಮಕೂರು ಜಿಲ್ಲೆ ಹೆಬ್ಬೂರಿನ ಕೋದಂಡಾಶ್ರಮ ಮಠದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿರುವುದಾಗಿ ಮಠದ ಪ್ರಕಟಣೆ ತಿಳಿಸಿದೆ.
ಸ್ಥಾನಿಕ ಬ್ರಾಹ್ಮಣ ಮಹಾಮಂಡಳದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ್ದ ಸ್ವಾಮೀಜಿ, ‘ಶಿವಳ್ಳಿ ಬ್ರಾಹ್ಮಣ ಹುಡುಗರು ಕುಡಿದು ಮೋರಿಯಲ್ಲಿ ಬೀಳುತ್ತಿದ್ದಾರೆ’ ಎಂದು ಹೇಳಿದ್ದರು.
ಈ ಕುರಿತು ಸ್ಪಷ್ಟನೆ ನೀಡಿರುವ ಮಠದ ವ್ಯವಸ್ಥಾಪಕ ಸುಬ್ರಹ್ಮಣ್ಯ ಶಾಸ್ತ್ರಿ ಅವರು, ‘ಬ್ರಾಹ್ಮಣ ಸಮುದಾಯದ ಯುವಕರು ದುಶ್ಚಟಗಳಿಗೆ ದಾಸರಾಗುತ್ತಿರುವುದರ ಬಗ್ಗೆ ಸ್ವಾಮೀಜಿ ಪ್ರಸ್ತಾಪಿಸಿದ್ದರು. ಯಾವುದೇ ಸಮಾಜವನ್ನು ಟೀಕಿಸುವುದು ಸ್ವಾಮೀಜಿ ಉದ್ದೇಶವಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.