ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಸೌಧದ ಬಾಳಿಕೆಗೆ ಧಕ್ಕೆ?: ಲೋಕೋಪಯೋಗಿ ಇಲಾಖೆ ಕಳವಳ

Last Updated 21 ಫೆಬ್ರುವರಿ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಆಡಳಿತಾಂಗದ ಕೇಂದ್ರವಾದ ವಿಕಾಸಸೌಧ ನಿರ್ಮಾಣಕ್ಕೆ ಕಳಪೆ ಕಲ್ಲುಗಳನ್ನು ಬಳಸಿರುವುದರಿಂದ ಕಟ್ಟಡದ ಬಾಳಿಕೆ ಮತ್ತು ಭದ್ರತೆಗೆ ಧಕ್ಕೆಯಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ರಾಜ್ಯ ಸರ್ಕಾರದ ಕೈಸೇರಿರುವ ಲೋಕಾಯುಕ್ತ ವಿಚಾರಣಾ ವರದಿಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ.ಕಳಪೆ ಕಲ್ಲುಗಳಿಂದಾಗಿ ಬಿರುಕು, ತೇವಾಂಶ ಕಾಣಿಸಿಕೊಂಡುಕಟ್ಟಡದ ಬಾಳಿಕೆ ಮತ್ತು ಭದ್ರತೆಗೂ ಧಕ್ಕೆಯಾಗಲಿದೆ ಎಂದು ವಿಚಾರಣಾ ಅಧಿಕಾರಿಗಳ ಮುಂದೆ ಶಿಸ್ತು ಪ್ರಾಧಿಕಾರವೂ ಆದ ಲೋಕೋಪಯೋಗಿ ಇಲಾಖೆ ಹೇಳಿದೆ.

ವಿಕಾಸಸೌಧ ಕಟ್ಟಡಕ್ಕೆ ಕಳಪೆ ಕಲ್ಲುಗಳನ್ನು ಬಳಸಿರುವ ಕುರಿತು 11 ವರ್ಷ ಸುದೀರ್ಘ ವಿಚಾರಣೆ ನಡೆಸಿದ ಲೋಕಾಯುಕ್ತ 39 ಪುಟಗಳ ವರದಿ ಕೊಟ್ಟಿದೆ. ಕಳಪೆ ಕಲ್ಲುಗಳ ಬಳಕೆಗೆ ಅರ್ಧ ಡಜನ್‌ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.

‘ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ್ದ ಪ್ರಕಾರಕಟ್ಟಡಕ್ಕೆ ಏಕರೂಪ, ಗಾತ್ರ ಮತ್ತು ಮೇಲ್ಮೈ ಹೊಂದಿದ್ದ (ಆಶ್ಲರ್‌) ಕಲ್ಲುಗಳನ್ನು ಬಳಸಬೇಕಿತ್ತು. ಆದರೆ, ಕಳ‍ಪೆ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಕಲ್ಲುಗಳ ಆರು ಮುಖಗಳನ್ನು ಕೆತ್ತಿ ಸಮತಟ್ಟು ಮಾಡದೆ, ಒಂದು ಬದಿಯನ್ನು (ಕಟ್ಟಡ ಮುಂಭಾಗ) ಮಾತ್ರ ಸಮ ಮಾಡಲಾಗಿದೆ’. ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

‘ಒಳಮೈಗಳನ್ನು ಹಾಗೇ ಬಿಟ್ಟು ಗಾರೆಮೆತ್ತಲಾಗಿದೆ. ಕಲ್ಲುಗಳ ನಡುವೆ 3 ಎಂ.ಎಂ ಅಂತರ ಕಾಯ್ದುಕೊಂಡಿಲ್ಲ. ವೈಟ್‌ ಸಿಮೆಂಟ್‌ ಮತ್ತು ಪೋರ್ಟ್‌ಲ್ಯಾಂಡ್‌ ಸಿಮೆಂಟ್‌ ಮಿಶ್ರಣ ಹಾಕದೆ ಎಂ– 20 ಕಾಂಕ್ರಿಟ್‌ ಬಳಸಲಾಗಿದೆ. ಇದು ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ ಮಾನ ದಂಡಕ್ಕೆ ಅನುಗುಣವಾಗಿಲ್ಲ’ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

‘ನಿರ್ಮಾಣ ವೇಳೆಯ ಮಾರ್ಪಾಡುಗಳು ಗಮನಕ್ಕೆ ಬಂದರೂ ಗುತ್ತಿಗೆದಾರರ ವಿರುದ್ಧ ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಲಿಲ್ಲ. ಮಾರ್ಪಾಡನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಅನುಮತಿ ಪಡೆದಿಲ್ಲ. ಅಲ್ಲದೆ, ಟೆಂಡರ್‌ನಲ್ಲಿ ನಮೂದಿಸಿದಂತೆ ಕಾಮಗಾರಿ ನಡೆಯುತ್ತಿದೆ ಎಂದು ಮೆಶರ್‌ಮೆಂಟ್‌ ಪುಸ್ತಕದಲ್ಲಿ ಬರೆಯಲಾಗಿದೆ. ಇದರಿಂದ ಭಾರಿ ನಷ್ಟವಾಗಿದೆ’ ಎಂದು ಸ್ಪಷ್ಟಪಡಿಸಲಾಗಿದೆ.

6 ಎಂಜಿನಿಯರ್‌ಗಳ ವೇತನ ಬಡ್ತಿಗೆ ಕುತ್ತು

ಕಳಪೆ ಕಲ್ಲುಗಳ ಬಳಕೆ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ಗಳಾದ ಬಿ.ಕೆ ಪವಿತ್ರ ಹಾಗೂ ಎನ್‌.ಜೆ. ಗೌಡಯ್ಯ ಸೇರಿದಂತೆ ಆರು ಎಂಜಿನಿಯರ್‌ಗಳ ಮೇಲಿನ ಆರೋಪವು ಭಾಗಶಃ ಸಾಬೀತಾಗಿರುವುದರಿಂದ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುತ್ತಿರುವುದಾಗಿ ಲೋಕಾಯುಕ್ತ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

ಪವಿತ್ರ 2028ರ ಜುಲೈ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದು, ಐದು ವರ್ಷಗಳ ಅವಧಿಗೆ ವಾರ್ಷಿಕ ವೇತನ ಬಡ್ತಿ ನೀಡಬಾರದು. ಗೌಡಯ್ಯ 2022ರ ಫೆಬ್ರುವರಿಯಲ್ಲಿ ನಿವೃತ್ತಿ ಆಗಲಿದ್ದು, ಮೂರು ವರ್ಷ ವಾರ್ಷಿಕ ಬಡ್ತಿ ಕೊಡಬಾರದು, ಆನಂತರ ಎರಡು ವರ್ಷ ಪಿಂಚಣಿಯಲ್ಲಿ ಶೇ 25ರಷ್ಟು ಹಣಕ್ಕೆ ಕತ್ತರಿ ಹಾಕಬೇಕು ಎಂದು ತಿಳಿಸಲಾಗಿದೆ.

ಈಗಾಗಲೇ ನಿವೃತ್ತರಾಗಿರುವ ಕೆ. ಶಿವಕುಮಾರ್, ಎಂ.ಎಸ್‌. ಸತೀಶ್‌, ಆರ್‌.ವಿ. ನರಸೇಗೌಡ ಮತ್ತು ಸಿ. ವಿರೂಪಾಕ್ಷಪ್ಪ ಅವರಿಗೆ ನೀಡುವ ಪಿಂಚಣಿಯಲ್ಲಿ ಶೇ 25ರಷ್ಟು ಹಣವನ್ನು ಐದು ವರ್ಷಗಳವರೆಗೆ ಕಡಿತಗೊಳಿಸುವಂತೆ ಹೇಳಲಾಗಿದೆ.

ಲೋಕಾಯುಕ್ತ 2008ರ ನವೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆ ಅಂದಿನ 14 ಎಂಜಿನಿಯರ್‌ಗಳ ವಿರುದ್ಧ ಇಲಾಖೆ ವಿಚಾರಣೆಗೆ ಅನುಮತಿ ನೀಡುವಂತೆ ಕೇಳಿತ್ತು. 2009ರ ಜನವರಿಯಲ್ಲಿ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಸಿ. ಜಯರಾಂ, ಟಿ.ಡಿ. ಮನಮೋಹನ್‌ ಹಾಗೂ ಪಿ. ಸಿದ್ದಪ್ಪ ಅವರು ಸೇವೆಯಿಂದ ನಿವೃತ್ತರಾಗಿ ನಾಲ್ಕು ವರ್ಷ ಪೂರ್ಣಗೊಂಡಿರುವುದರಿಂದ ಇಲಾಖೆ ವಿಚಾರಣೆ ಹಿಂದಕ್ಕೆ ಪಡೆದು ಸರ್ಕಾರ 2015ರಲ್ಲಿ ಆದೇಶ ಹೊರಡಿಸಿತ್ತು.

ಜಿ.ಎಸ್‌. ನರಸಿಂಹಮೂರ್ತಿ, ಜಿ. ಮುನಿನಾರಾಯಣಸ್ವಾಮಿ, ವಿಜಯರಾಘವನ್‌, ಬಿ.ವಿ. ರಮೇಶ್‌ ಮತ್ತು ಎಂ.ನಾಗರಾಜ್‌ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ಶಿಸ್ತು ಪ್ರಾಧಿಕಾರ ವಿಫಲವಾಗಿದೆ ಎಂದು ಹೇಳಿ ಅವರ ವಿರುದ್ಧದ ವಿಚಾರಣೆಯನ್ನು ಲೋಕಾಯುಕ್ತ ಕೈಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT